ಇಸ್ಲಮಾಬಾದ್: ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರದಾಳಿಯ ಬಳಿಕ ಪಾಕಿಸ್ತಾನದ ವಿರುದ್ದ ಭಾರತ ಕೈಗೊಂಡ ರಾಜತಾಂತ್ರಿಕ ನಡೆಗಳ ವಿರುದ್ಧ ಇದೀಗ ನೆರೆ ರಾಷ್ಟ್ರವೂ ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ.
ಗುರುವಾರ (ಏ.24) ವಾಘಾ ಬಾರ್ಡರ್ ಗಡಿ ಬಂದ್ ಮಾಡುವುದು, ಭಾರತೀಯ ಪ್ರಜೆಗಳಿಗೆ ನೀಡುತ್ತಿದ್ದ ವೀಸಾ ರದ್ದು ಮಾಡುವುದು ಮತ್ತು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಲಾಗುವುದು ಎಂದು ಪಾಕಿಸ್ತಾನ ಹೇಳಿದೆ.
ಪಹಲ್ಲಾಮ್ ನಲ್ಲಿ ನಡೆದ ಉಗ್ರ ಕೃತ್ಯವನ್ನು ಖಂಡಿಸಿ ಭಾರತ ಪಾಕ್ ವಿರುದ್ದ ಸಿಂಧೂ ನದಿ ನೀರು ಒಪ್ಪಂದ ಸೇರಿ ಐದು ನಿರ್ಧಾರಗಳನ್ನು ಕೈಗೊಂಡ 24 ಗಂಟೆಯೊಳಗೆ ಪಾಕಿಸ್ತಾನವು ತನ್ನ ನಿರ್ಧಾರ ಪ್ರಕಟಿಸಿದೆ.
ಶಿಮ್ಲಾ ಒಪ್ಪಂದವನ್ನು ಪ್ರಸ್ತಾಪಿಸಿದ ಇಸ್ಲಾಮಾಬಾದ್, ನವದೆಹಲಿ “ಅಂತಾರಾಷ್ಟ್ರೀಯ ಕಾನೂನು ಮತ್ತು ಕಾಶ್ಮೀರದ ಕುರಿತಾದ ವಿಶ್ವಸಂಸ್ಥೆಯ ನಿರ್ಣಯಗಳನ್ನು” ಪಾಲಿಸದ ಹೊರತು ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಷ್ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್ಎಸ್ಸಿ) ಸಭೆಯ ಬಳಿಕ ಇಸ್ಲಮಾಬಾದ್ ಈ ನಿರ್ಧಾರ ಪ್ರಕಟಿಸಿದೆ.
ಭಾರತದ ಕ್ರಮವನ್ನು “ಏಕಪಕ್ಷೀಯ, ಅನ್ಯಾಯದ ಮತ್ತು ರಾಜಕೀಯ ಪ್ರೇರಿತ ಮತ್ತು ಕಾನೂನು ಬಾಹಿರ” ಎಂದು ಪಾಕಿಸ್ತಾನ ಕರೆದಿದೆ.
ಪಾಕ್ ಕೈಗೊಂಡ ಪ್ರಮುಖ ನಿರ್ಧಾರಗಳು
1 ವಾಘಾ ಗಡಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುವುದು. ಈ ಮಾರ್ಗದ ಮೂಲಕ ಭಾರತದಿಂದ ಎಲ್ಲಾ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಅನುಮತಿಯೊಂದಿಗೆ ವಾಘಾ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿದ ಭಾರತೀಯ ಪ್ರಜೆಗಳು ಏಪ್ರಿಲ್ 30ರೊಳಗೆ ಹಿಂತಿರುಗಬೇಕು.
2 ಶಿಮ್ಲಾ ಒಪ್ಪಂದ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ತಡೆಹಿಡಿಯಲಾಗಿದೆ.
3 ಸಿಖ್ ಧಾರ್ಮಿಕ ಯಾತ್ರಿಕರನ್ನು ಹೊರತುಪಡಿಸಿ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ಭಾರತೀಯ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತೀಯರು 48 ಗಂಟೆಗಳ ಒಳಗೆ ದೇಶ ಬಿಡಲು ಕೇಳಲಾಗಿದೆ.
4 ಪಾಕಿಸ್ತಾನದ ವಾಯುಪ್ರದೇಶವನ್ನು ಈಗ ಎಲ್ಲಾ ಭಾರತೀಯ ಒಡೆತನದ ಅಥವಾ ಭಾರತದಿಂದ ನಿರ್ವಹಿಸಲ್ಪಡುವ ವಿಮಾನಯಾನ ಸಂಸ್ಥೆಗಳಿಗೆ ಮುಚ್ಚಲಾಗಿದೆ.
5 ಮೂರನೇ ದೇಶಗಳ ಮೂಲಕ ಸೇರಿದಂತೆ ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ.
6 ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಏಪ್ರಿಲ್ 30 ರೊಳಗೆ ದೇಶವನ್ನು ತೊರೆಯಬೇಕು. ಹೈಕಮಿಷನ್ನಲ್ಲಿ ಅವರ ಸ್ಥಾನಗಳು ರದ್ದಾಗಿವೆ.