Share News

ಬಾವಿಗೆ ಬಿದ್ದ ಮರಿಯಾನೆಯೊಂದನ್ನು ತಾಯಿ ಆನೆ ರಕ್ಷಿಸಿರುವ ಘಟನೆ ಎರ್ನಾಕುಲಂನ ಮಲಯತ್ತೂರ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ಇಲ್ಲಿತ್ತೋಟ್ ಒಂದನೇ ಬ್ಲಾಕ್‌ನಲ್ಲಿರುವ ಸಾಜು ಎಂಬವರ ನಿವಾಸದ ಬಾವಿಗೆ ಮರಿಯಾನೆ ಬಿದ್ದಿದೆ. ಆಗ ಆನೆಗಳ ಹಿಂಡು ಘೀಳಿಟ್ಟ ಸದ್ದನ್ನು ಕೇಳಿದ ಸ್ಥಳೀಯರಿಗೆ ಈ ಘಟನೆ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿದು ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರಾದರೂ, ಕಾಡಾನೆಗಳ ಹಿಂಡು ಬಾವಿಯ ಬಳಿಯೇ ಬೀಡು ಬಿಟ್ಟಿದ್ದುದರಿಂದ ಅವರು ರಕ್ಷಣಾ ಕಾರ್ಯಾಚರಣೆಗೆ ತೊಡಗಲು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಸಿಬ್ಬಂದಿಗಳು ಆನೆಗಳ ಹಿಂಡನ್ನು ಚದುರಿಸಲು ಮುಂದಾಗಿದ್ದಾರೆ.

ಈ ವೇಳೆ ತಾಯಿ ಆನೆಯು ಬಾವಿಯ ಕಲ್ಲುಗಳನ್ನು ಕೆಡವಿ, ಮರಿಯಾನೆಯು ಬಾವಿಯಿಂದ ಮೇಲೇರಲು ದಾರಿ ಮಾಡಿಕೊಟ್ಟಿದೆ. ಮರಿಯಾನೆಯು ಬಾವಿಯಿಂದ ಮೇಲೇರಿ ಬಂದ ನಂತರ, ಆನೆಯ ಹಿಂಡು ಕಾಡಿನತ್ತ ತೆರಳಿತು ಎಂದು ವರದಿಯಾಗಿದೆ.

ಈ ಪ್ರದೇಶದಲ್ಲಿ ನಿರಂತರವಾಗಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ವರದಿಯಾಗುತ್ತಲೇ ಇವೆ. ಅರಣ್ಯ ಸಿಬ್ಬಂದಿಗಳ ವಿರುದ್ಧ ಈ ಪ್ರದೇಶದ ನಿವಾಸಿಗಳು ರಸ್ತೆ ತಡೆ ನಡೆಸಿ, ಪ್ರತಿಭಟನೆಗಳನ್ನೂ ಮಾಡುತ್ತಿದ್ದಾರೆ.

ಜನವಸತಿ ಪ್ರದೇಶಗಳನ್ನು ಅತಿಕ್ರಮಿಸುತ್ತಿರುವ ವನ್ಯಜೀವಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಈ ಪ್ರದೇಶದ ನಿವಾಸಿಗಳು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.


Share News

Comments are closed.

Exit mobile version