ಪುತ್ತೂರು: ಕೃತಕ ಬುದ್ಧಿಮತ್ತೆ ಬರಲಾರಂಭಿಸಿದ ನಂತರ ಊಹಿಸಲಾರದ ಸಂಗತಿಗಳೆಲ್ಲ ಕಾಣಿಸಿಕೊಳ್ಳಲಾರಂಭಿಸಿವೆ. ಹಾಗಾಗಿ ಮೇಲ್ನೋಟಕ್ಕೆ ಕಂಡದ್ದೆಲ್ಲವನ್ನೂ ನಂಬಿ ಮೋಸ ಹೋಗಬಾರದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಮರ್ಶಿಸಿ ಮುಂದುವರಿಯಬೇಕು ಎಂದು ಎಎಸ್ಪಿ ಅನಿಲ್ ಕುಮಾರ್ ಭೂಮಾ ರೆಡ್ಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಗರ ಠಾಣೆಯಿಂದ ಆಯೋಜಿಸಲ್ಪಟ್ಟ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಮಾಜದಲ್ಲಿ ಡ್ರಗ್ಸ್ ಮಾರಾಟ, ಸೇವನೆ ನಡೆಯುತ್ತಿದೆ. ಈ ಬಗೆಗೆ ವಿದ್ಯಾಥಿಗಳು ಎಚ್ಚರಿಕೆಯಿಂದಿರಬೇಕು. ಅಂತೆಯೇ ಲೈಂಗಿಕ ದೌರ್ಜನ್ಯಗಳೂ ಹೆಚ್ಚುತ್ತಿವೆ. ಈ ಹಿನ್ನೆಲಯಲ್ಲಿ ನಾವು ಮಾತ್ರ ಜಾಗರೂಕರಾಗಿದ್ದರೆ ಸಾಲದು, ನಮ್ಮ ಸುತ್ತಮುತ್ತಲೂ ಜಾಗೃತಿ ಮೂಡಿಸಬೇಕು ಎಂದರಲ್ಲದೆ ಜನಸ್ನೇಹಿ ಪೊಲೀಸರು ಪೋಲೀಸ್ ಠಾಣೆಯಲ್ಲಿದ್ದಾಗ ಇಲಾಖೆ ಜೊತೆ ಜನರಿಗೆ ಬಾಂಧವ್ಯ ಬೆಳೆಯುತ್ತದೆ. ಭಯ, ಅಪನಂಬಿಕೆಗಳು ಇದ್ದಾಗ ಆರಕ್ಷಕ ಠಾಣೆಗೆ ಹೋಗಲು ಜನರು ಹೆದರುತ್ತಾರೆ ಎಂದರು.
ಡಿವೈಎಸ್ಪಿ ಅರುಣ್ ನಾಗೇಗೌಡ, ಎಸ್ಐ ಆಂಜನೇಯ ರೆಡ್ಡಿ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು.
ಜೀವಶಾಸ್ತ್ರ ಉಪಾನ್ಯಾಸಕ ವಿಷ್ಣು ಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರಿನ ಎಸ್.ಐ ಜಾನ್ಸನ್ ಡಿ’ಸೋಜ ವಂದಿಸಿದರು.


























