ಪುತ್ತೂರು: ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿದ ಬ್ರಿಟಿಷ್ ಅಧಿಕಾರಿಗಳನ್ನು ವೈಭವೀಕರಿಸುವ ಶಿಕ್ಷಣ ಇನ್ನೂ ಕೂಡ ನಮ್ಮ ಪಠ್ಯ ಪುಸ್ತಕಗಳಲ್ಲಿ ಇದೆ. ಮನುಷ್ಯನನ್ನು ಮನುಷ್ಯತ್ವಕ್ಕೇರಿಸುವ ಶಿಕ್ಷಣ ನಮಗೆ ಬೇಕಾಗಿದೆ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯಪಟ್ಟರು.
ಜೂ. 22ರಂದು ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಸಭಾಭವನದಲ್ಲಿ ಧರ್ಮ ಶಿಕ್ಷಣ ಸಮಿತಿ ಏರ್ಪಡಿಸಿದ್ದ ಧರ್ಮ ಶಿಕ್ಷಣದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಗುರುಕುಲ ಶಿಕ್ಷಣ ಪದ್ಧತಿ ಬ್ರಿಟಿಷರಿಂದ ನಾಶವಾಗಿದೆ. ಇಂದಿನ ಶಿಕ್ಷಣ ಪಠ್ಯಪುಸ್ತಕಗಳಲ್ಲಿ ದೇಶಭಕ್ತಿ ಕಾಣಸಿಗುವುದಿಲ್ಲ. ಇಂದಿನ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ದೇಶಪ್ರೇಮ ಎದ್ದು ಕಾಣಬೇಕು. ಹಿಂದೂ ಧರ್ಮದ ರಕ್ಷಣೆ ಗೋಸ್ಕರ ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಹಿಂದೂ ಎಂದಾಗ ರೋಮಾಂಚನ ಆಗಬೇಕು. ಜಗದ್ಗುರು ಶಂಕರಾಚಾರ್ಯರು ಹಿಂದೂ ಧರ್ಮದ ಬಗ್ಗೆ ನೀಡಿರುವ ಸಂದೇಶಗಳನ್ನು ಅಪ್ಪಣೆ ಎಂದು ಪರಿಗಣಿಸಿ ಪರಿಪಾಲನೆ ಮಾಡುವ ಕಾರ್ಯ ಪ್ರತಿಯೊಬ್ಬ ಹಿಂದೂವಿನಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿಯವರ ಮಾರ್ಗದರ್ಶನದಲ್ಲಿ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕೌಡಿಚ್ಚಾರು ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ದೀಪಕ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಧರ್ಮ ಶಿಕ್ಷಣ ತಾಲೂಕು ಸಮಿತಿ ಅಧ್ಯಕ್ಷ ಸದಾಶಿವ ರೈ ದಂಬೆಕಾನ, ಗ್ರಾಮದೈವ ಕುತ್ಯಾಡಿ ಧೂಮಾವತಿ ದೈವಸ್ಥಾನದ ಪ್ರಧಾನ ಕರ್ಮಿ ಸದಾಶಿವ ಮಣಿಯಾಣಿ, ಧರ್ಮ ಶಿಕ್ಷಣ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಕೋಡಿಂಬಾಡಿ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಧರ್ಮ ಶಿಕ್ಷಣದ ಶಿಕ್ಷಕರಾದ ವೆಂಕಟೇಶ್ ಪ್ರಸಾದ್ ಕುಂಟಾಪು ಕುರಿಂಜ, ಗೌರಿಶಂಕರ ಮರತ್ತ ಮೂಲೆ, ಪ್ರಮೋದ್ ನಾಯಕ್ ಕೇಪುಳುಕಾನ, ದಯಾನಂದ ಬೈರಮೂಲೆ, ಶಾಂಭವಿ ಕುತ್ಯಾಡಿ, ಉಷಾ ನಾಯಕ್ ಕೇಪುಳಕಾನ, ವೇದಾವತಿ ಹೊಸಗದ್ದೆ ಮತ್ತು ಯಕ್ಷಿತಾ ಮರತ್ತಮೂಲೆ ಅವರನ್ನು ಶಾಲು ಹಾಕಿ ಗೌರವಿಸಲಾಯಿತು. ಅಕ್ಷರ, ತ್ರಿಶಾನಿ, ಅನುಷಾ ಪ್ರಾರ್ಥಿಸಿದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಶಾಂಭವಿ ಕುತ್ಯಾಡಿ ವಂದಿಸಿದರು. ಕೀರ್ತಿ ಮಾಯಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು.

















