ಬೆಂಗಳೂರು:ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಇನ್ನೂ ಐದು ಹೊಸ ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಅಭಿವೃದ್ಧಿ ಸಂಕಲ್ಪವನ್ನು ವಿವರಿಸಿದರು.ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ
6ನೇ ಗ್ಯಾರಂಟಿ: ಭೂಮಿ
7ನೇ ಗ್ಯಾರಂಟಿ: ನೀರು
8ನೇ ಗ್ಯಾರಂಟಿ: ಮನೆ
9ನೇ ಗ್ಯಾರಂಟಿ: ಇ-ಖಾತಾ
10ನೇ ಗ್ಯಾರಂಟಿ: ಉಚಿತ ಆರೋಗ್ಯ ಸೇವೆ
ಈ ಎಲ್ಲವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
“ರಾಜ್ಯದಲ್ಲಿ ನೀವು ನಮಗೆ ಶಕ್ತಿ ನೀಡಿದ್ದಾರೆ. ನಿಮ್ಮ ಋಣ ತೀರಿಸಲು ನಾವು ಬಂದಿದ್ದೇವೆ. ಇದು ಕಟ್ಟಡ ನಿರ್ಮಾಣ ಮಾತ್ರವಲ್ಲ, ಜನರ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವೂ ಹೌದು. ನಮ್ಮ ಕೆಲಸಗಳೇ ನಮ್ಮ ಸಾಕ್ಷಿಯಾಗುತ್ತವೆ,” ಎಂದು ಹೇಳಿದರು.
ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿ – 300 ಕಿ.ಮೀ ತೀರ ಪ್ರದೇಶಕ್ಕೆ ಅಭಿವೃದ್ಧಿ ಯೋಜನೆ
ಕರಾವಳಿ ಭಾಗದ 300 ಕಿಲೋಮೀಟರ್ ಉದ್ದದ ತೀರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದರು.
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಆಧಾರವಾಗಿಸಿಕೊಂಡು ಕರಾವಳಿಯನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಹೂಡಿಕೆದಾರರೊಂದಿಗೆ ಚರ್ಚೆಗಳು ನಡೆಯುತ್ತಿದ್ದು, ಈ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ.
“ಸ್ಥಳೀಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಅಥವಾ ಹೊರರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಿಸಬೇಕು ಎಂಬುದು ನಮ್ಮ ಉದ್ದೇಶ,” ಎಂದು ಸ್ಪಷ್ಟಪಡಿಸಿದರು.
ಕೋಮುಗಲಭೆ ತಡೆ – ಹೂಡಿಕೆದಾರರಿಗೆ ಭರವಸೆ
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಭಾಗದಲ್ಲಿ ಒಂದೇ ಒಂದು ಕೋಮುಗಲಭೆಯೂ ನಡೆಯದಂತೆ ನೋಡಿಕೊಂಡಿದ್ದೇವೆ. ಇದುವೇ ಸರ್ಕಾರದ ಶಕ್ತಿ. ಹಿಂದಿನ ಅವಧಿಯಲ್ಲಿ ಗಲಭೆಗಳ ಕಾರಣದಿಂದ ಹೂಡಿಕೆದಾರರು ಮುಂದೆ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
“ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ಅವಕಾಶ ನೀಡುತ್ತಾನೆ; ಅದನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕರ್ತವ್ಯ,” ಎಂದು ತಿಳಿಸಿದರು.





















