ಪುತ್ತೂರು: ಇಲ್ಲಿನ ಕೋಟಿ – ಚೆನ್ನಯ ಜೋಡುಕರೆಯಲ್ಲಿ ತರಬೇತಿ ಪಡೆಯುತ್ತಿದ್ದ ಜೋಡಿ ಕೋಣ ಮಂಜೊಟ್ಟಿಯಿಂದ ತಪ್ಪಿಸಿಕೊಂಡು ಬಸ್ ನಿಲ್ದಾಣದತ್ತ ಓಟಕ್ಕಿತ್ತಿದ್ದು, ಬಳಿಕ ಅದನ್ನು ಹಿಡಿಯಲು ವಾರಸುದಾರರು ಬೈಕ್ ಏರಿದ ಪ್ರಸಂಗ ಮಂಗಳವಾರ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಸೈಯ್ಯದ್ ಅಬ್ಬಾಸ್ ಚೆನ್ನಾವರ ಅವರ ಜೋಡಿ ಕೋಣಗಳಿಗೆ ತರಬೇತಿ ನೀಡಲಾಗುತ್ತಿತ್ತು. ಕರೆಯಲ್ಲಿ ಓಡಿದ ಕೋಣಗಳು, ಮಂಜೊಟ್ಟಿಯನ್ನು ತಲುಪಿತು. ಇನ್ನೇನು ಕೋಣಗಳನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಕೋಣಗಳು ಮರಳಿ ಕರೆಯತ್ತ ಜಿಗಿದು, ಕೋಣಗಳನ್ನು ಬಿಡುವ ಪ್ರದೇಶದತ್ತಲೇ ಓಡಿತು. ಬಳಿಕ ಖಾಸಗಿ ಬಸ್ ನಿಲ್ದಾಣ ಮುಂಭಾಗದ ರಸ್ತೆಗೆ ನುಗ್ಗಿ, ಅಲ್ಲಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದತ್ತ ಓಟಕ್ಕಿತ್ತಿತು.
ಕೋಣಗಳು ಹಿಡಿತಕ್ಕೆ ಸಿಗದೇ ಬೇಕಾಬಿಟ್ಟಿಯಾಗಿ ಮುಖ್ಯರಸ್ತೆಯಲ್ಲಿ ಓಡುತ್ತಿತ್ತು. ಸಾರ್ವಜನಿಕರಿಗೆ ಹಾಯುವ ಅಪಾಯವೂ ಇತ್ತು. ಪುಣ್ಯಾವಶಾತ್, ಯಾರಿಗೂ ಅಪಾಯ ಆಗಿಲ್ಲ. ಅಷ್ಟರಲ್ಲಿ ಕೋಣಗಳ ವಾರೀಸುದಾರರು ಬೈಕ್ ಏರಿದರು.
ಬೈಕ್ ನಲ್ಲಿ ತೆರಳಿದ ಕೋಣಗಳ ವಾರೀಸುದಾರರು ಕೋಣಗಳನ್ನು ಹಿಡಿಯಲು ಸಫಲವಾದರು. ಮರಳಿ ಕೋಣಗಳನ್ನು ಕೋಟಿ – ಚೆನ್ನಯ ಕರೆಗೆ ಮರಳಿ ತರಲಾಯಿತು.





















