ಪುತ್ತೂರು: ನಗರಸಭೆಯ ಅನುಮತಿ ಪಡೆದುಕೊಂಡು ಕಾವೇರಿಕಟ್ಟೆ ಬಳಿ ಬ್ಯಾನರ್ ಹಾಕಿದ್ದೇವು. ಏಕಾಏಕಿ ತೆರವು ಮಾಡಿ, ಕಾಣೆಯಾಗಿದೆ ಎಂದು ತಿಳಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧಪಟ್ಟವರ ಅನುಮತಿ ಪಡೆದುಕೊಂಡೇ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಂಬೇಡ್ಕರ್ ಅವರ ಬ್ಯಾನರನ್ನು ಅಳವಡಿಸಿದ್ದೇವು. ಆದರೆ ಇದನ್ನು ಪುತ್ತೂರು ನಗರಸಭೆ ಮಾತ್ರ ತೆಗೆದು ಹಾಕಿದೆ. ವಿಚಾರಿಸಿದರೆ, ನಿರ್ಲಕ್ಷ್ಯವಾಗಿ ಮಾತನಾಡುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬ್ಯಾನರನ್ನು ಕಿತ್ತು ಹಾಕಿ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದ ಅವರು, ತೆಗೆದು ಹಾಕಿರುವ ಬ್ಯಾನರನ್ನು ಮತ್ತೆ ಹಾಕುವಂತೆ ಒತ್ತಾಯಿಸಿದರು.
ರಾಜು ಹೊಸ್ಮಠ ಮಾತನಾಡಿ, ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಅಂಬೇಡ್ಕರ್ ಭವನ ಸಿಗಲಿಲ್ಲ. ಇದೀಗ ಬ್ಯಾನರ್ ಹಾಕಿದರೆ, ಅದನ್ನು ಕಿತ್ತು ಹಾಕಿ ಕಸದ ಬುಟ್ಟಿಗೆ ಹಾಕುತ್ತಾರೆ. ಇದು ತುಂಬಾ ಬೇಸರದ ವಿಷಯ. ಇದರ ವಿರುದ್ಧ ಪೌರಾಯುಕ್ತರ ವಿರುದ್ಧ ಪ್ರಕರಣ ದಾಖಲಾಗಬೇಕು. ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರ ಮೇಲೆ ಪ್ರಕರಣ ದಾಖಲಾಗಿ, ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ತಪ್ಪದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಮುಖರಾದ ಸತೀಶ್ ಬೂಡುಮಕ್ಕಿ, ಬಾಲಕೃಷ್ಣ ದೊಡ್ಡೇರಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.


























