ಪುತ್ತೂರು: ದ್ವೇಷ ಭಾಷಣದಿಂದಲೇ ಕೆಲಸ ಮಾಡುವ ಹಿಂದೂ ಸಂಘಟನೆಗಳು ಈ ವರ್ಷದಲ್ಲಿ ಕ್ತೈಸ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಅಮಳ ರಾಮಚಂದ್ರ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂತಾ ಕ್ಲಾಸ್ ನ ಡ್ರೆಸ್ ಹರಿದು ಇದು ನಿನ್ನ ದೇಶವಲ್ಲ ಎಂದು ಹಲ್ಲೆ ನಡೆಸ್ತಾರೆ. ಚರ್ಚಿಗೆ ನುಗ್ಗಿ ಯಾವ ಪುಸ್ತಕದ ಆಧಾರದಲ್ಲಿ ಮಾತನಾಡುತ್ತೀ ಎಂದು ಫಾದರ್ ಮೇಲೆ ಹಲ್ಲೆ ನಡೆಸುತ್ತಾರೆ. ಇಂತಹ ಹಲವು ಘಟನೆಗಳಿವೆ. ಇದರ ಮೂಲಕ ಇಡೀಯ ದೇಶದ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ತಮ್ಮ ಡ್ರೆಸಿನ ಮೇಲೆ ಹನುಮಂತನ ಭಾವಚಿತ್ರ ಹಾಕಿ ಭಜರಂಗಿ ಎಂದು ಹೇಳುತ್ತಾ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಾರೆ ಎಂದರೆ ಆಂಜನೇಯನಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಮೋದಿ ಅವರು ಯಾವೊಂದು ಪ್ರತಿಕ್ರಿಯೆ ನೀಡದೇ, ಚರ್ಚ್ ಮೇಲಿನ ದಾಳಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಇನ್ನು ಬಾಂಗ್ಲಾದ ಕಡೆ ನೋಡುವುದಾದರೆ, ಇತ್ತೀಚಿನ ದಿನಗಳಲ್ಲೇ ಮೂರು ಹಿಂದೂ ಅಲ್ಪಸಂಖ್ಯಾತರನ್ನು ಕೊಂದಿದ್ದಾರೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು. ಬಾಂಗ್ಲಾದ ಘಟನೆಯಂತೆಯೇ ಭಾರತದ ಘಟನೆಯೂ ಖಂಡನೀಯ ಎಂದರು.
ದೇಶವನ್ನು ಒಡೆಯುವ ಕಾರ್ಯದಲ್ಲಿ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ನಿರತವಾಗಿದೆ. ವಸುದೈವ ಕುಟುಂಬ ಎನ್ನುವ ಧರ್ಮ, ಶಾಂತಿ, ಸಮಾನತೆಯನ್ನು ಬೋಧಿಸುತ್ತದೆ. ಆದರೆ ಇವರು ಧರ್ಮಕ್ಕೆ ಅಪಚಾರ ಎಸಗುತ್ತಿರುವುದು ಅಕ್ಷಮ್ಯ ಅಪರಾಧ. ಇನ್ನಾದರೂ ಇಂತಹ ಪುಂಡಾಟಿಕೆಯನ್ನು ನಿಲ್ಲಿಸಬೇಕು ಎಂದರು.
ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಚರ್ಚಿಗೆ ನುಗ್ಗಿ ಫಾಸ್ಟರ್ ಮೇಲೆ ಕೈ ಹಾಕ್ತಾರೆ. ಇಂತಹ ಕೆಟ್ಟ ಪ್ರವೃತ್ತಿಗಳ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಚರ್ಕವರ್ತಿ ಸೂಲಿಬೆಲೆ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್ ಕೋಟ್ಯಾನ್, ಜಾನ್ ಕುಟಿನ್ಹಾ ಉಪಸ್ಥಿತರಿದ್ದರು.


























