ಪುತ್ತೂರು: ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ವತಿಯಿಂದ ನವೆಂಬರ್ 16ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರ ಕಲಾಪ್ರತಿಭೆ `ಆಳ್ವಾಸ್ ಸಾಂಸ್ಕೃತಿಕ ವೈಭವ’ ಅನಾವರಣಗೊಳ್ಳಲಿದೆ.
ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಕಾರ್ಯಾಧ್ಯಕ್ಷ ಬಿ. ಪುರಂದರ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿ.ಎಚ್. ಕೋಚಣ್ಣ ರೈ ಪ್ರಾಂಗಣ ಮತ್ತು ಜಿ.ಎಲ್. ಆಚಾರ್ಯ ವೇದಿಕೆಯಲ್ಲಿ `ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ನಡೆಯಲಿದೆ. ಡಾ. ಮೋಹನ್ ಆಳ್ವ ಮತ್ತು ತಮಗೆ 40 ವರ್ಷಗಳ ಹಿಂದಿನ ಸಂಬಂಧವಿದೆ. ಅವರು ಸಮುದಾಯಕ್ಕೆ ದಾರಿದೀಪ. ಮೋಹನ್ ಆಳ್ವ ಅವರು “ಕಲಿಕೆಯ ಪ್ರಥಮ ಅವಶ್ಯಕತೆ ಎಂದರೆ ಎಳೆಯರ ವ್ಯಕ್ತಿತ್ವಕ್ಕೆ ಸೃಜನಾತ್ಮಕವಾದ ಹೊಸ ಆಯಾಮವನ್ನು ಸೃಷ್ಟಿಸುವುದು. ಇದೊಂದು ಮನರಂಜನೆಯ ವಿಷಯವಲ್ಲ, ಸಂದೇಶ ಕೊಡುವ ವಿಚಾರ” ಎಂದು ಹೇಳಿದರು.
ಅವರ ಸಂಸ್ಥೆ ಹಿಂದುಸ್ಥಾನದಲ್ಲಿ ಸ್ಮರಣೀಯ ಸಂಸ್ಥೆಯಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 12 ಪ್ರಕಾರಗಳ ನೃತ್ಯ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿದ್ದು, ಅವುಗಳಲ್ಲಿ ಪಾರಮಾರ್ಥಿಕ, ಲೌಕಿಕ ಮತ್ತು ತಾತ್ವಿಕತೆಯ ಅಂಶಗಳನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.
ಸಮಿತಿ ಕೋಶಾಧಿಕಾರಿ ಬಿ. ಐತ್ತಪ್ಪನಾಯ್ಕ ಮಾತನಾಡಿ, ಈ ಹಿಂದೆ ಪುತ್ತೂರಿನ ಸುದಾನ ದೇವಾಲಯದ ಮೈದಾನದಲ್ಲಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಬಳಿಕ ವಿಶ್ವನುಡಿಸಿರಿ, ವಿರಾಸತ್ ರೂಪದಲ್ಲಿ ಅದು ವಿಸ್ತರಿಸಿತು. 2016ರಲ್ಲಿ ಮತ್ತೊಂದು ಕಾರ್ಯಕ್ರಮ ಅಲ್ಲೇ ನಡೆದಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಪುತ್ತೂರಿನಲ್ಲಿ ಆಳ್ವಾಸ್ನ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಇದೀಗ ಮೂರನೇ ಬಾರಿಗೆ ಈ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪತ್ತೂರು ಉಮೇಶ್ ನಾಯಕ್ ಅವರು ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಆಸನ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೊ. ಅನೋಲ ಮತ್ತು ಉಷಾ ಬಿ. ಶೆಟ್ಟಿ ಉಪಸ್ಥಿತರಿದ್ದರು.

























