ಪುತ್ತೂರು: ಮದುವೆಯಾಗುವುದಾಗಿ ವಂಚಿಸಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಮಗುವಿನ ಡಿ.ಎನ್.ಎ. ವರದಿ ಬಂದಿದೆ. ವರದಿ ಪ್ರಕಾರ, ಶ್ರೀಕೃಷ್ಣ ಜೆ. ರಾವ್ ಮಗುವಿನ ತಂದೆ ಎನ್ನುವುದು ಸಾಬೀತಾಗಿದೆ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಸಂತ್ರಸ್ತೆಯ ಮನೆಯವರಿಗೆ ಈಗಾಗಲೇ ಮಾಹಿತಿಯನ್ನು ತಿಳಿಸಲಾಗಿದೆ. ವರದಿ ಕೈ ಸೇರಿದ್ದು, ಮುಂದಿನ ಕ್ರಮದ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆದಿತ್ತು. ಆದರೆ ಇಂದು ಅದರ ಅಗತ್ಯ ಇಲ್ಲ. ಡಿ.ಎನ್.ಎ. ಪರೀಕ್ಷೆಯಿಂದ ಸತ್ಯ ತಿಳಿದುಕೊಳ್ಳಬಹುದು. ಇದೀಗ ಈ ಪ್ರಕರಣದಲ್ಲೂ ಡಿ.ಎನ್.ಎ. ಪರೀಕ್ಷೆ ಸತ್ಯವನ್ನು ಬಯಲಿಗೆ ತಂದಿದೆ ಎಂದರು.
ಮುಂದೆ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯನ್ನು ವಿವಾಹ ಆಗಬೇಕೆಂದು ನಮ್ಮ ಕೋರಿಕೆ. ಯಾಕೆಂದರೆ ಹುಡುಗ ಇನ್ನು ಬಾಳಿ ಬದುಕಬೇಕಾದವ. ಅವರು ಮದುವೆ ಆದರೆ ಉತ್ತಮ. ನಮಗೂ ಕೋರ್ಟ್ ಗೆ ಹೋಗಲು ಇಷ್ಟವಿಲ್ಲ. ಆದರೂ ಕೋರ್ಟ್ ನಲ್ಲಿ ಅದರ ರೀತಿ ನಡೆಯುತ್ತದೆ ಎಂದವರು ಹೇಳಿದರು.
ಸಂತ್ರಸ್ತೆಯ ತಾಯಿ ನಮಿತಾ ಮಾತನಾಡಿ, ಡಿ.ಎನ್.ಎ. ವರದಿ ನಿಜವನ್ನು ತಿಳಿಸಿದೆ. ಮುಂದೆಯಾದರೂ ಹುಡುಗಿಯನ್ನು ಶ್ರೀಕೃಷ್ಣ ರಾವ್ ಮದುವೆಯಾಗಬೇಕು ಎಂದರು.
ಸಂತ್ರಸ್ತೆ ಮಾತನಾಡಿ, ಶ್ರೀಕೃಷ್ಣ ಜೆ. ರಾವ್ ಹಾಗೂ ತಾನು ಪ್ರೀತಿಸುತ್ತಿದ್ದು, ಇದರ ಫಲವಾಗಿ ಮಗು ಜನಿಸಿದೆ. ಈಗಲೂ ತಾನು ಆತನನ್ನು ಪ್ರೀತಿಸುತ್ತಿದ್ದು, ಒಂದಾಗಿ ಬಾಳಲು ಸಿದ್ದನಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರಿಷಿ ವಿಶ್ವಕರ್ಮ ಹಾಗೂ ಸಿ.ಟಿ. ಆಚಾರ್ಯ ಮೈಸೂರು ಉಪಸ್ಥಿತರಿದ್ದರು.