ಬಂಟ್ವಾಳ: ಪ್ರಜ್ಞೆ ತಪ್ಪಿ ಬಿದ್ದ ಆಟೋ ಚಾಲಕರೋರ್ವರಿಗೆ ಚಿಕಿತ್ಸೆ ನೀಡಿ, ಜೀವ ಉಳಿಸಿದ ಪೂಂಜಾಲಕಟ್ಟೆ ಜನೌಷಧಿ ಕೇಂದ್ರ ಸಿಬ್ಬಂದಿಯ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ಸಿಬ್ಬಂದಿ ಸುರೇಖಾ ಅವರು ಆಟೋ ಚಾಲಕನ ಜೀವ ಉಳಿಸಿದವರು.
ಪ್ರಧಾನಮಂತ್ರಿ ಜನಔಷಧಿ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಈ ಕೇಂದ್ರಕ್ಕೆ ಆಟೋ ಚಾಲಕರೊಬ್ಬರು ತನ್ನ ಅಣ್ಣನಿಗೆ ಔಷಧಿ ಖರೀದಿಸಲು ಬಂದಿದ್ದರು. ಔಷಧಿ ಪಡೆದುಕೊಂಡ ನಂತರ ಚಿಲ್ಲರೆ ಹಣ ನೀಡಲು ತನ್ನ ಆಟೋದ ಬಳಿಗೆ ತೆರಳಿದಾಗ, ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದು ಬಿಟ್ಟರು. ತುರ್ತು ಪರಿಸ್ಥಿತಿಯನ್ನು ತಕ್ಷಣ ಅರ್ಥ ಮಾಡಿಕೊಂಡ ಸುರೇಖಾ ಅವರು ಇತರ ಸಿಬ್ಬಂದಿಯ ಸಹಾಯ ಪಡೆದು ತಕ್ಷಣ ಅವರನ್ನು ಒಳಗೆ ಕರೆದುಕೊಂಡು ಬಂದು ರಕ್ತದೊತ್ತಡ ಪರೀಕ್ಷಿಸಿದರು. ಅವರ ಬಿ.ಪಿ ತೀರಾ ಕಡಿಮೆಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ದೃಢಪಟ್ಟಿದ್ದು, ತಕ್ಷಣವೇ ಅವಶ್ಯಕ ಉಪಚಾರ ನೀಡಿದ್ದಾರೆ.
ಅದಾಗಲೇ ಅಟೋ ಚಾಲಕ ಪ್ರಜ್ಞೆ ಕಳೆದುಕೊಂಡಿದ್ದು, ಸುರೇಖಾ ಅವರು ಹೃದಯ ಸಿಪಿಆರ್ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ ಪರಿಣಾಮ ಆಟೋ ಚಾಲಕನಿಗೆ ಪ್ರಜ್ಞೆ ಮರಳಿ ಬಂದಿದೆ. ನಂತರ ಅವರನ್ನು ತಜ್ಞ ವೈದ್ಯರ ಬಳಿಗೆ ತಪಾಸಣೆಗೆ ಶಿಫಾರಸು ಮಾಡಿದ್ದಾರೆ.
ಸುರೇಖಾ ಅವರ ಸಮಯೋಚಿತ ಕಾರ್ಯದಿಂದ ಜೀವ ಉಳಿಸಿದ ಈ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದು, ಸುರೇಖಾ ಅವರ ಸೇವಾ ಮನೋಭಾವನೆಗೆ ಅಭಿನಂದನೆ ವ್ಯಕ್ತವಾಗಿದೆ.