ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರಿಗೆ ನೋಟಿಸನ್ನು ನೀಡಿದ ನಡೆಯನ್ನು ಖಂಡಿಸಿ, ಸಂಘಟನೆಯ ಪ್ರಮುಖರ ಮೇಲೆ ಎಫ್.ಐ.ಆರ್. ದಾಖಲಿಸಿ, ರಾತ್ರೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ನುಗ್ಗುತ್ತಿರುವುದರ ವಿರುದ್ಧ ಕಾರ್ಯಕರ್ತರ ಬೃಹತ್ ಖಂಡನಾ ಸಭೆ ಮಂಗಳವಾರ ಸಂಜೆ ಸುಭದ್ರ ಸಭಾಮಂದಿರದಲ್ಲಿ ನಡೆಯಿತು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸರಕಾರ ನೀಡಿರುವ ಗಡಿಪಾರಿನ ನೋಟಿಸನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅದೇನೆ ಇದ್ದರೂ ನಾನು ಹಿಂದೂ ಸಮಾಜಕ್ಕಾಗಿಯೇ ಕೆಲಸ ಮಾಡುತ್ತೇನೆ. ಇಂದಿನಿಂದ ಕಾರ್ಯಕರ್ತರ ಮನೆಗೆ ತೆರಳಿ ಇದೇ ರೀತಿಯ ಕೆಲಸ ಮುಂದುವರಿಸಿದರೆ ದಕ್ಷಿಣ ಕನ್ನಡದಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂದು ತೋರಿಸುತ್ತೇವೆ ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೇ ಹಿಂದೂ ಸಮಾಜಕ್ಕೋಸ್ಕರ ಕೆಲಸ ಮಾಡುತ್ತಿರುವ ಹಿಂದೂ ನಾಯಕರನ್ನು ದಮನ ಮಾಡಲು ಕಾಂಗ್ರೆಸ್ ಸರಕಾರ ಹೊರಟಿದೆ. ಮೂಢನಂಬಿಕೆಗಳ ಹೆಸರಿನಲ್ಲಿ ಹಿಂದೂ ಸಮಾಜವನ್ನು ಮೂಲೆಗೊತ್ತಲು ಪ್ರಯತ್ನ, ಅಕ್ರಮ ಗೋ ಸಾಗಾಟಕ್ಕೆ ಬೆಂಬಲ ನೀಡುತ್ತಾ ಬಂದಿದೆ. ದೇಶಭಕ್ತ ಸುಹಾಸ್ ಶೆಟ್ಟಿ ಕೊಲೆಗೀಡಾದಾಗ ಬಜ್ಪೆ ಚಲೋ ಮಾಡಿದರೆ ಪ್ರಕರಣ ದಾಖಲು ಮಾಡುತ್ತಾರೆ. ಕಾರ್ಯಕರ್ತರ ಮಾನಸಿಕ ಸ್ಥಿತಿ ಕುಗ್ಗಿಸುವ ಪ್ರಯತ್ನ ನಡೆಯಿತು. ಸುಮಾರು 80 ವರ್ಷ ಪ್ರಾಯದ ಪೂವಪ್ಪ ಅವರ ಮನೆಗೆ ನಡುರಾತ್ರಿ ತೆರಳಿ ಫೊಟೋ ತೆಗಿತಾರೆ ಎಂದಾದರೆ, ಮುಂದೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಆಲೋಚಿಸಿ. ಹಾಗಾಗಿ ಇಂತಹ ಕ್ರಮಕ್ಕೆ ಪುತ್ತೂರಿನಲ್ಲಿ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಇದಕ್ಕೆ ಬೇಕಾದ ರೂಪುರೇಷೆಯನ್ನು ಯೋಜಿಸಿಯೇ ಮುಂದಡಿ ಇಟ್ಟಿದ್ದೇವೆ. ಸರಕಾರದ ಈ ಕ್ರಮವನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದರು.
ದಕ್ಷಿಣ ಕನ್ನಡದ ಜನ ಹಿಂದೂತ್ವವನ್ನು ಬಿಟ್ಟು ಬದುಕುವುದೇ ಇಲ್ಲ. ತತ್ವ ಸಿದ್ಧಾಂತಕ್ಕೆ ಬದ್ಧರಾಗಿಯೇ ಇರುತ್ತೇವೆ. ಅಧಿಕಾರಕ್ಕಾಗಿ ಮುಸಲ್ಮಾನರ ಓಲೈಸುವ ರಾಜಕೀಯದ ಕೆಲಸಕ್ಕೆ ಅವಕಾಶ ನೀಡುವುದೇ ಇಲ್ಲ ಎಂದರು.
ಹಿಂದೂ ಸಮಾಜದ ಕೆಲಸ ಮಾಡುವುದು ತಪ್ಪೇ?
ಗಣರಾಜ್ ಭಟ್ ಕೆದಿಲ ಮಾತನಾಡಿ, ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ. ಇಲ್ಲಿ, ಹಿಂದೂಗಳು ಬೀದಿ ಹೆಣವಾಗುತ್ತಿದ್ದಾರೆ. ಆದರೂ ಹಿಂದೂ ಮುಖಂಡರ ಮೇಲೆಯೇ ಕ್ರಮ. ಮುಸ್ಲಿಂ ಮುಖಂಡರ ಮೇಲೆ ಈ ಕ್ರಮ ಯಾಕಿಲ್ಲ? ಯಾರೋ ಕೆಲ ಮುಸ್ಲಿಂ ಯುವಕರನ್ನು ಗಡಿಪಾರು ಮಾಡಲು ಹೊರಟಿದ್ದಾರೆ. ಯಾರನ್ನು ಗಡಿಪಾರು ಮಾಡಬೇಕೋ ಅವರನ್ನು ಗಡಿಪಾರು ಮಾಡಲು ಮುಂದಾಗುತ್ತಿಲ್ಲ. ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಾನು ತೋರಿಸುತ್ತೇನೆ ಎಂದು ಸವಾಲೆಸೆದರು. ಹಾಗೆಂದು ಪೊಲೀಸರನ್ನು ತಾನು ದೂಷಿಸುವುದಿಲ್ಲ. ಮೇಲಿಂದ ಒತ್ತಡ ಬಂದರಷ್ಟೇ ತಾನೇ ಪೊಲೀಸರು ಕ್ರಮ ಕೈಗೊಳ್ಳುವುದು ಎಂದರು.
ದಿನದ ಎಲ್ಲಾ ಸಮಯವನ್ನು ಸಮಾಜಕ್ಕಾಗಿ ಮೀಸಲಿಟ್ಟ ಅರುಣ್ ಕುಮಾರ್ ಪುತ್ತಿಲ ಅವರನ್ನು ಗಡಿಪಾರು ಮಾಡುವ ಉದ್ದೇಶವಾದರೂ ಏನು? ಹಿಂದೂ ಸಮಾಜದ ಕೆಲಸ ಮಾಡುವುದು ತಪ್ಪೇ? ಹಾಗೊಂದು ವೇಳೆ ಗಡಿಪಾರು ಮಾಡಿದರೆ ಅಲ್ಲಿ ಹೋಗಿಯೂ ಹಿಂದೂ ಸಮಾಜದ ಕೆಲಸ ಮಾಡುವುದಲ್ಲವೇ? ಹಾಗೆಂದು ಗಡಿಪಾರು ಆಗುವುದಿಲ್ಲ ಬಿಡಿ ಎಂದರು.
ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಯಿಂದ ನರಸಿಂಹ ಮಾಣಿ ಅವರಿಗೆ ಬೆದರಿಕೆ ಬರುತ್ತದೆ. ಇದನ್ನು ವಿಚಾರಣೆ ನಡೆಸುವ ಬದಲು, ಅಮಾಯಕರ ಮೇಲೆ, ಹಿಂದೂ ಮುಖಂಡರ ಮೇಲೆ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರಕಾರ ಮುಂದಾಗುತ್ತದೆ. ಇದು ಮುಸಲ್ಮಾನರ ಬಾಲಂಗೋಚಿ ಆಗಲು ಪ್ರಯತ್ನಿಸುತ್ತಿದೆ. ಇದರಿಂದ ಕಾಂಗ್ರೆಸಿಗೆ ಪ್ರಯೋಜನವಿಲ್ಲ. ಮುಸಲ್ಮಾನರೇ ಕಾಂಗ್ರೆಸ್ ಸರಕಾರಕ್ಕೆ ಅಂತಿಮ ಮೊಳೆ ಹೊಡೆಯಲಿದ್ದಾರೆ ಎಂದರು.
ಹಿಂದೂ ಸಮಾಜದೊಳಗಡೆ ಸ್ವಲ್ಪ ಸರಿಯಿಲ್ಲ ಎಂಬ ಮಾತು ಇತ್ತು. ಆದರೆ ಸಿದ್ದರಾಮಯ್ಯ ಅವರು ನಮ್ಮನ್ನೆಲ್ಲಾ ಒಂದು ಮಾಡಿ ಬಿಟ್ಟರು. ಹಿಂದೂಗಳ ತಾಕತ್ತನ್ನು ಪ್ರದರ್ಶನ ಮಾಡಲು ಇದೇ ಸರಿಯಾದ ಸಂದರ್ಭ. ಹಿಂದೂ ಸಮಾಜ ಬೋರ್ಗರೆಯಲು ಸಿದ್ಧ. ಬಳಿಕ ಇಟ್ಟಿಗೆ ಕಟ್ಟಿ ಅದನ್ನು ತಡೆಯುವ ವ್ಯರ್ಥ ಪ್ರಯತ್ನ ಬೇಡ ಎಂದರು.
ಹಿಂದೂ ಸಂಘಟನೆ ವಿರುದ್ಧ ಕಾಂಗ್ರೆಸ್ ಕ್ರಮ:
ಬಿಜೆಪಿಯ ಮಾಜಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಹಿಂದೂ ಸಮಾಜಕ್ಕೆ ಸಮರ್ಪಣಾ ಭಾವದಿಂದ ಕೆಲಸ ಮಾಡಲು ಸಿದ್ಧರಾದ ಯುವಕರನ್ನು ಗಡಿಪಾರು ಮಾಡಲು ಸಿದ್ದರಾಮಯ್ಯ ಸರಕಾರ ಮುಂದಾಗಿದೆ. ಇದರೊಂದಿಗೆ ವಿವಿಧ ರೀತಿಯ ಕೇಸ್’ಗಳನ್ನು ಹಾಕಲಾಗುತ್ತಿದೆ. ಹಾಗಾದರೆ ಹಿಂದೂಗಳ ಸಂಘಟನೆ ಮಾಡುವುದು ತಪ್ಪೇ? ಹಿಂದೂಗಳೆಲ್ಲಾ ತಮ್ಮ ವೈಮನಸ್ಸನ್ನು ಬಿಟ್ಟು ಇಂತಹ ಷಡ್ಯಂತ್ರಗಳ ವಿರುದ್ಧ ಒಗ್ಗಟ್ಟಾಗಬೇಕಿದೆ ಹೋರಾಡಬೇಕಾಗಿದೆ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ಎನ್ನುವುದು ದೊಡ್ಡ ವಿಷಯವಲ್ಲ. ಇದನ್ನು ಸಮರ್ಥವಾಗಿ ಎದುರಿಸಬಲ್ಲವರು. ಹಿರಿಯರು ಆದ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಹಿಂದೂ ಸಮಾಜದ ಹಿರಿಯರಿಗೂ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಇದಕ್ಕೆಲ್ಲಾ ಹಿಂದೂ ಸಮಾಜ ಬಗ್ಗುವುದಿಲ್ಲ ಎಂದರು.
ಗಡಿಪಾರು ಕಾನೂನು ಬಾಹಿರ:
ಚಿನ್ಮಯ್ ರೈ ಮಾತನಾಡಿ, ಹಿಂದೂ ಸಮಾಜದ ಯುವಕರ ಮೇಲೆ ನಿರಂತರವಾಗಿ ಕಿರುಕುಳ ನೀಡುವ ಕೆಲಸ ಮಾಡುತ್ತಿದೆ. ನೀವು ಹಾಕುವ ಕೇಸಿಗೆ, ಗಡಿಪಾರಿಗೆ ಹೆದರಿ ಕುಳಿತುಕೊಳ್ಳುವ ಸಮಾಜ ಇದಲ್ಲ. ಹಾಗೆಂದು ಗಡಿಪಾರು ಎನ್ನುವುದೇ ಕಾನೂನು ಬಾಹಿರ. ಪುತ್ತಿಲ ಅವರ ಮೇಲೆ ಚುನಾವಣೆಗೆ ಮೊದಲೇ 39 ಪ್ರಕರಣಗಳಿತ್ತು. ಅವು, ಅಕ್ರಮ ಗೋ ಸಾಗಾಟ ತಡೆದದ್ದು, ಮಠ – ಮಂದಿರಗಳ ಮೇಲಾದ ದಾಳಿಯನ್ನು ವಿರೋಧಿಸಿದ್ದಕ್ಕಾಗಿ ಪ್ರಕರಣ ದಾಖಲು ಮಾಡಲಾಗಿತ್ತೇ ಹೊರತು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಲ್ಲ. ಹಾಗಾಗಿ ನಾವೆಲ್ಲಾ ಅರುಣ್ ಕುಮಾರ್ ಪುತ್ತಿಲ ಅವರ ಜೊತೆ ನಾವೆಲ್ಲಾ ನಿಲ್ಲಬೇಕಾಗಿದೆ ಎಂದರು.
ಪ್ರಮುಖರಾದ ಮಹೇಂದ್ರ ವರ್ಮ, ಚಂದಪ್ಪ ಮೂಲ್ಯ, ಗಣೇಶ್, ಅನಿಲ್ ತೆಂಕಿಲ, ರವಿ ಕುಮಾರ್ ಮಠ ಉಪಸ್ಥಿತರಿದ್ದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ರೈ ಪಂಜಳ ಹಾಗೂ ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.