ಕಾಸರಗೋಡು: ನಾಪತ್ತೆಯಾಗಿದ್ದ ಮೂಲ್ಕಿ ನಿವಾಸಿ ಆಟೋ ಚಾಲಕನ ಮೃತದೇಹ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಮೂಲ್ಕಿ ಕೊಳ್ಳಾಡಿನ ಮುಹಮ್ಮದ್ ಶರೀಫ್ (52) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ರಾತ್ರಿ ಕೇರಳ- ಕರ್ನಾಟಕ ಗಡಿ ಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸಮೀಪದಲ್ಲಿ ಇವರ ಆಟೋ ರಿಕ್ಷಾ ಕೂಡಾ ಕಂಡು ಬಂದಿದೆ. ಮೃತ ದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಮಾಹಿತಿ ತಿಳಿದು ಶರೀಫ್ ರವರ ಮನೆಯವರು ಹಾಗೂ ಸಂಬಂಧಿಕರು ಮಂಜೇಶ್ವರಕ್ಕೆ ತಲುಪಿದ್ದು, ಶುಕ್ರವಾರ ಬೆಳಗ್ಗೆ ಪೊಲೀಸ್ ಶ್ವಾನ ದಳ, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಲಿದ್ದು, ಬಳಿಕ ಮೃತದೇಹ ವನ್ನು ಮೇಲಕ್ಕೆತ್ತಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಜೂಜಾಟ ಆಟೋ ಚಾಲಕನ ಕೊಲೆಗೆ ಕಾರಣವಾಗಿದೆಯೇ ಅಥವಾ ಮಾದಕ ವ್ಯಸನಿಗಳು ಬಾಡಿಗೆಗೆ ಕರೆದೊಯ್ದು ಈ ಕೃತ್ಯ ನಡೆಸಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ