ಮಂಗಳೂರಿನ ಕೂಳೂರಿನಲ್ಲಿ ನಡೆದ ಅಪಘಾತದಲ್ಲಿ ಬೆಟ್ಟಂಪಾಡಿಯ ಕಲೆಂಜಿಲದ ಯುವಕನೋರ್ವ ಮೃತಪಟ್ಟ ಘಟನೆ ಏ. 9ರಂದು ಸಂಜೆ ನಡೆದಿದೆ.
ಯುವಕನನ್ನು ಬೆಟ್ಟಂಪಾಡಿ ಗ್ರಾಮದ ಕಲೆಂಜಿಲ ಸೀತಾರಾಮ ಪೂಜಾರಿಯವರ ಪುತ್ರ ದೀಕ್ಷಿತ್ ಪೂಜಾರಿ (23) ಎಂದು ಗುರುತಿಸಲಾಗಿದೆ.
ಮಂಗಳೂರಿನ ಜೆಎಸ್ಡಬ್ಲ್ಯೂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದೀಕ್ಷಿತ್, ಮಂಗಳೂರಿನ ಪಿಜಿಯಲ್ಲಿದ್ದರು. ಏ. 9ರಂದು ಮಧ್ಯಾಹ್ನ ಊಟದ ವಿರಾಮದ ವೇಳೆ ತನ್ನ ಬಜಾಜ್ ಪಲ್ಸರ್ ಬೈಕ್ನಲ್ಲಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿದ್ದ ಸಂದರ್ಭ ಕೂಳೂರು ಸೇತುವೆಯಿಂದ ಮುಂದೆ ಸಾಗಿ ಬಸ್ ತಂಗುದಾಣ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಲ ಭಾಗದಲ್ಲಿ ಬಂದ ಕಾರನ್ನು ತಪ್ಪಿಸಲು ಎಡ ಭಾಗದಿಂದ ಬಸ್ ಚಲಾಯಿಸಿಕೊಂಡು ಬಂದು ದೀಕ್ಷಿತ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಬೈಕ್ ಸವಾರ ದೀಕ್ಷಿತ್ ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟಿದ್ದು ಆತನ ದೇಹದ ಮೇಲೆಯೇ ಬಸ್ ಹರಿದು ಹೋಗಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಎ ಜೆ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರ ಸಹೋದರ ರಕ್ಷಿತ್ ನೀಡಿದ ದೂರಿನಂತೆ ಖಾಸಗಿ ಬಸ್ ಚಾಲಕ ಮಹಮ್ಮದ್ ರಫೀಕ್ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























