ವಿಜಯಪುರ: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಅ.16ರ ಗುರುವಾರ ನಡೆದಿದೆ.
ಸ್ವಪ್ನಾ ರಾಜು ರಾಠೋಡ್ (10), ಶಿವಂ ರಾಜು ರಾಠೋಡ್ (8) ಹಾಗೂ ಕಾರ್ತಿಕ ಈಶ್ವರ ರಾಠೋಡ್ (8) ಮೃತಪಟ್ಟ ಮಕ್ಕಳು.
ಮಿಂಚನಾಳ ತಾಂಡಾದ ಮಾದೇವ ನಗರದ ನಿವಾಸಿಗಳಾದ ಈ ಮೂವರು ಮಕ್ಕಳು ಮನೆಯ ಸಮೀಪದ ಹೊಲದ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆದರೆ, ಯಾವಾಗ ಬಿದ್ದಿದ್ದಾರೆ?, ಹೇಗೆ ಬಿದ್ದಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.
ಮಕ್ಕಳು ತುಂಬಾ ಹೊತ್ತಾದರೂ ಕಾಣಿಸದೇ ಇದ್ದಾಗ ಚಪ್ಪಲಿ ಗಮನಿಸಿ, ಹೊಂಡದಲ್ಲಿ ಶೋಧ ನಡೆಸಿದ ಬಳಿಕ ಘಟನೆ ಬೆಳಕಿಗ ಬಂದಿದೆ.
ಸ್ವಪ್ನಾ, ಶಿವಂ ಒಂದೇ ಕುಟುಂಬದ ಮಕ್ಕಳಾಗಿದ್ದಾರೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿದ ಕೂಡಲೇ ತಾಪಂ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೂವರು ಮಕ್ಕಳ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮಕ್ಕಳನ್ನು ಕಳೆದುಕೊಂಡ ಎರಡು ಕುಟುಂಬಗಳ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.