ದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಾ*lವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿ ಕ್ಯಾಂಟ್ ಮೆಟ್ರೋ ನಿಲ್ದಾಣದ ಬಳಿಯ ರಿಂಗ್ ರಸ್ತೆಯಲ್ಲಿ ಭಾನುವಾರ (ಸೆ.14) ನಡೆದಿದೆ.
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದ ನವತೋಜ್ ಸಿಂಗ್ (52) ಮೃತಪಟ್ಟಿದ್ದು, ಅವರ ಪತ್ನಿ ಸಂದೀಪ್ ಕೌರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ನವತೋಜ್ ಸಿಂಗ್ ದಂಪತಿ ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ತಮ್ಮ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಬಿಎಂಡಬ್ಲ್ಯು ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಬದಲು ಅಪಘಾತ ಸ್ಥಳದಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ಜಿಟಿಬಿ ನಗರದಲ್ಲಿರುವ ನುಲೈಫ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ದಂಪತಿಯ ಪುತ್ರ ಹೇಳಿದ್ದಾರೆ.
ಬಿಎಂಡಬ್ಲ್ಯೂ ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಅವರು ಕೂಡ ಗಾಯಗೊಂಡಿದ್ದಾರೆ. ಟ್ಯಾಕ್ಸಿ ಮೂಲಕ ಗಾಯಾಳುಗಳನ್ನು ದೂರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆದಾಗಲೇ ನನ್ನ ತಂದೆ ಸಾ*ವನ್ನಪ್ಪಿದ್ದರು ಎಂದು ಪುತ್ರ ಹೇಳಿದ್ದಾರೆ.
ಕಾರನ್ನು ಚಲಾಯಿಸುತ್ತಿದ್ದ ಮಹಿಳೆಯನ್ನು ಗಗನ್ಪ್ರೀತ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪರೀಕ್ಷಿತ್ ಪ್ರಯಾಣಿಕ ಸೀಟಿನಲ್ಲಿದ್ದರು ಎನ್ನಲಾಗಿದೆ.
ಅಪಘಾತವೆಸಗಿದ ಬಿಎಂಡಬ್ಲ್ಯೂ ಕಾರು ಮತ್ತು ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಅಪಘಾತದ ಸ್ಥಳವನ್ನು ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲಿಸಿದ್ದಾರೆ.
ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.