ಮಂಗಳೂರು:ನಂತೂರು ಸಮೀಪ ಭಾನುವಾರ ರಾತ್ರಿ ಸುರಿದ ಮಳೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ಖಾಸಗಿ ಆಸ್ಪತ್ರೆಯ ಯುವ ಫಿಸಿಯೋಥೆರಪಿಸ್ಟ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಕೇರಳದ ಆಲಪ್ಪುಝ ಮೂಲದ ಡಾ. ಮೊಹಮ್ಮದ್ ಅಮಲ್ (29) ಎಂದು ಗುರುತಿಸಲಾಗಿದೆ. ಇವರು ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಭಾನುವಾರ ರಾತ್ರಿ ಸುಮಾರು 11:45ರ ವೇಳೆಗೆ ಡಾ. ಅಮಲ್ ಅವರು ತಮ್ಮ ಸಿಯಾಝ್ ಕಾರಿನಲ್ಲಿ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಂದಿಗೆ ನಂತೂರಿನಿಂದ ಪಂಪೈಲ್ ಕಡೆಗೆ ತೆರಳುತ್ತಿದ್ದರು. ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಕಾರು ಅತಿವೇಗದಿಂದ ಡಿವೈಡರ್ನ ಗ್ರಿಲ್ಗೆ ಡಿಕ್ಕಿ. 2-3 ಬಾರಿ ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದೆ. ಚಾಲಕ ಡಾ. ಮೊಹಮ್ಮದ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ವಿದ್ಯಾರ್ಥಿನಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ವೇಳೆ, ಅಪಘಾತಕ್ಕೀಡಾದ ಕಾರನ್ನು ತಪ್ಪಿಸಲು ಯತ್ನಿಸಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಇದರಿಂದಾಗಿ ನಂತೂರು-ಪಂಪೈಲ್ ಹೆದ್ದಾರಿಯಲ್ಲಿ ರಾತ್ರಿಯಿಡೀ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಈ ಸಂಬಂಧ ಮಂಗಳೂರು ಪೂರ್ವ ಸಂಚಾರಿ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.