ದೇವಾಲಯದಲ್ಲಿ ಗೋಡೆ ಕುಸಿದು ಕನಿಷ್ಠ 8 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಧವಾರ (ಏ.30) ಮುಂಜಾನೆ ನಡೆದಿದೆ.
ವಿಶಾಖಪಟ್ಟಣಂನ ಸಿಂಹಾಚಲಂ ದೇವಾಲಯದಲ್ಲಿ ಈ ದುರಂತ ಘಟನೆ ನಡೆದಿದೆ.
ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಚಂದನಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಭಕ್ತರು 300 ರೂಪಾಯಿ ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಗೋಡೆ ಕುಸಿದು ಘಟನೆ ನಡೆದಿದೆ.
ಉತ್ಸವದ ಸಿದ್ಧತೆಗಳ ಭಾಗವಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದರಲ್ಲಿ ಉತ್ಸವಕ್ಕೆ ನಿರೀಕ್ಷಿಸಲಾಗಿದ್ದ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಟೆಂಟ್ ಗಳನ್ನು ಹಾಕಲಾಗಿತ್ತು. ಇದರ ಜತೆ ಹೊಸ ಗೋಡೆಯನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ.
ಮುಂಜಾನೆ ಈ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿತ್ತು. ಸಿಂಹಾಚಲಂನ ಗುಡ್ಡಗಾಡು ಪ್ರದೇಶದ ಆದ ಕಾರಣ ಮಣ್ಣು ಸಡಿಲಗೊಂಡಿದೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಮತ್ತು ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳ ತಂಡಗಳು ಸ್ಥಳದಲ್ಲಿ ನಿಯೋಜಿಸಲ್ಪಟ್ಟಿವೆ. ಗಾಯಗೊಂಡ ಭಕ್ತರನ್ನು NDRF ಮತ್ತು SDRF ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಮುಂಜಾನೆಯಿಂದಲೇ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಪ್ರದೇಶವು ಜನಸಂದಣಿಯಿಂದ ಕೂಡಿತ್ತು ಮತ್ತು ಸ್ವಲ್ಪ ದೂರದ ಬಸ್ ನಿಲ್ದಾಣದವರೆಗೂ ಸಾಲು ನಿಂತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಏ.30ರಂದು ಚಂದನೋತ್ಸವ ನಡೆಯುತ್ತದೆ. ಭಕ್ತರು ವರ್ಷಪೂರ್ತಿ ಶ್ರೀಗಂಧದ ಲೇಪದಿಂದ ಮುಚ್ಚಿದ ನರಸಿಂಹ ದೇವರನ್ನು ಈ ಚಂದನೋತ್ಸವಂ ಹಬ್ಬದ ಸಂದರ್ಭದಲ್ಲಿ ನೋಡುತ್ತಾರೆ.
ಘಟನೆ ಸಂಬಂಧ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.