ಬಾವಿಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು ಏಳು ಮಂದಿ ಹೋಗಿ, ಎಂಟು ಜನರೂ ಉಸಿರುಗಟ್ಟಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಖಂಡ್ವಾ ಜಿಲ್ಲೆಯ ಕೊಂಡಾವತ್ ಗ್ರಾಮದ ಗಂಗೌರ್ ಹಬ್ಬದ ಆಚರಣೆ ನಡೆಯುತ್ತಿತ್ತು. ಇದೀಗ ಈ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.
ಗಂಗೌರ ಹಬ್ಬದ ಆಚರಣೆಯ ಭಾಗವಾಗಿ ನೀರಿನಲ್ಲಿ ಮುಳುಗುವುದಕ್ಕಾಗಿ ಬಾವಿ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಬಾವಿ ಸ್ವಚ್ಛಗೊಳಿಸುವ ವೇಳೆ ಹಗ್ಗ ತುಂಡಾಗಿ ಮಧ್ಯಾಹ್ನ ವೇಳೆ ಒಬ್ಬ ಯುವಕ ಬಾವಿಗೆ ಬಿದ್ದಿದ್ದಾನೆ. ಆತನಿಗೆ ಮೇಲೆ ಬರಲು ಆಗಲಿಲ್ಲ. ಇದನ್ನು ಕಂಡು ಒಬ್ಬೊಬ್ಬರಾಗಿ ಏಳು ಮಂದಿ ರಕ್ಷಣೆಗೆ ಇಳಿದಿದ್ದು, ಸಾವಿಗೀಡಾಗಿದ್ದಾರೆ. ವಿಷಾನಿಲದಿಂದ ಉಸಿರುಗಟ್ಟಿ ಈ ಸರಣಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ದುರಂತದಲ್ಲಿ ಮೃತರಾದವರನ್ನು ರಾಕೇಶ್, ವಾಸುದೇವ್, ಅರ್ಜುನ್, ಗಜಾನಂದ್, ಮೋಹನ್, ಅಜಯ್, ಶರಣ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾಂಡ್ವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸಂತ್ರಸ್ತ ಯುವಕರ ಕುಟುಂಬ ಸದಸರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.