ಸುಳ್ಯ ಮುಖ್ಯ ರಸ್ತೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಎದುರು ಬ್ಯಾಂಕ್ ಆಫ್ ಬರೋಡಾದ ಪಕ್ಕದಲ್ಲಿರುವ ನಂದಿನಿ ಸ್ಟಾಲ್ ಗೆ ಕಂಟೇನರ್ ಗುದ್ದಿ ಕಟ್ಟಡದ ಒಂದು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ಇಂದು ಮುಂಜಾನೆ 5.30ಕ್ಕೆ ನಡೆದಿದೆ.
ಮಂಡ್ಯದಿಂದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನ ಸುಳ್ಯ ಪೊಲೀಸ್ ಠಾಣೆಯ ಕಾಂಪೌಂಡ್ ಕೊನೆಯಲ್ಲಿರುವ ಪುಟ್ ಪಾತ್ ಗೆ ನಿರ್ಮಿಸಿದ ತಡೆ ಬೇಲಿಗೆ ಗುದ್ದಿ ಅದರ ಪಕ್ಕದಲ್ಲಿರುವ ಪ್ಲವರ್ ಸ್ಟಾಲಿನ ಮುಂಭಾಗದ ಟೆಂಟ್ಗೆ ಗುದ್ದಿ ಎಲ್ ಡಿ ಬ್ಯಾಂಕ್ ನ ಮುಂಭಾಗದ ಕಾಂಪೌಂಡ್ ಗೆ ತಾಗಿ ನಂದಿನಿ ಸ್ಟಾಲ್ ಗೆ ಗುದ್ದಿ ಕಂಟೈನರ್ ಪಲ್ಟಿಯಾಗಿದೆ.
ಸುಳ್ಯ ಬಸ್ ನಿಲ್ದಾಣದಲ್ಲಿ ಪ್ರತಿದಿನ ನಿತ್ಯ ಬೆಳಿಗ್ಗೆ ಹತ್ತಾರು ಕಾರ್ಮಿಕರು ಹಾಗೂ ಬೇರೆ ಬೇರೆ ಊರಿಗೆ ತೆರಳಬೇಕಾದ ಪ್ರಯಾಣಿಕರು ಸೇರುವ ಸ್ಥಳವಾಗಿದೆ. ಅಪಘಾತ ನಡೆದ ಸಂದರ್ಭದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಆದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.
ಪಕ್ಕದ ನಂದಿನಿ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ರಿಂಗಪ್ಪ ಎಂಬುವರು ಕಂಟೈನರ್ ರಸ್ತೆಯಿಂದ ಪುಟ್ ಪಾತ್ ಗೆ ಹತ್ತುವ ದೃಶ್ಯವನ್ನು ನೋಡುತ್ತ ಬಸ್ ನಿಲ್ದಾಣದ ಕಡೆಗೆ ಓಡಿ ಜೀವವನ್ನು ಉಳಿಸಿಕೊಂಡಿದ್ದಾರೆ. ಕಂಟೈನರ್ ಅಡಿಯಲ್ಲಿ ಸ್ಕೂಟಿಯೊಂದು ಸಿಲುಕಿರುವುದಾಗಿ ತಿಳಿದುಬಂದಿದೆ.