ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ (87) ಅವರ ಅಂತ್ಯಕ್ರಿಯೆ ಗುರುವಾರ ನಡೆದಿದೆ. “ರಾಮನಂದಿ’ ಸಂಪ್ರದಾಯದಂತೆ ಸರಯೂ ನದಿಯ ತುಳಸೀದಾಸ್ ಘಾಟ್ನಲ್ಲಿ ದಾಸ್ ಅವರನ್ನು ಜಲಸಮಾಧಿ ಮಾಡಲಾಗಿದೆ. ಸಾಮಾನ್ಯವಾಗಿ ಧಾರ್ಮಿಕ ಮುಖಂಡರನ್ನು, ಸಂತರನ್ನು ಭೂಸಮಾಧಿ ಮಾಡಲಾಗುತ್ತದೆ.
ಸತ್ಯೇಂದ್ರ ದಾಸ್ ಅವರ ಅಂತಿಮ ವಿಧಿವಿಧಾನಕ್ಕೆ ಮುನ್ನ ಅಯೋಧ್ಯೆಯ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮರವಣಿಗೆ ನಡೆಸಲಾಯಿತು. ಹನುಮಾನ್ ಗಡಿ, ರಾಮಜನ್ಮಭೂಮಿ ಪ್ರದೇಶಕ್ಕೂ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿತ್ತು. ಬಳಿಕ ಯಾಂತ್ರೀಕೃತ ದೋಣಿಯ ಮೂಲಕ ಸರಯೂ ನದಿಯ ಮಧ್ಯಭಾಗಕ್ಕೆ ತರಲಾಯಿತು. ದೇಹಕ್ಕೆ ದೊಡ್ಡ ಶಿಲೆಯನ್ನು ಬಿಗಿದು, ಮಂತ್ರೋಪಾಸನೆಗಳನ್ನು ನೆರವೇರಿಸಿ ಅನಂತರ ದೇಹವನ್ನು ನದಿಗೆ ಅರ್ಪಿಸಲಾಯಿತು ಎಂದು ದಾಸ್ ಅವರ ಉತ್ತರಾಧಿಕಾರಿ ಪ್ರದೀಪ್ ದಾಸ್ ಮಾಹಿತಿ ನೀಡಿದ್ದಾರೆ.
1992ರಲ್ಲಿ ಬಾಬರಿ ಮಸೀದಿ ನೆಲಸಮದ ಸಂದರ್ಭದಲ್ಲಿ ಸತ್ಯೇಂದ್ರ ದಾಸ್ ರಾಮ ಮಂದಿರದ ಅರ್ಚಕರಾಗಿದ್ದರು. ಮೆದುಳು ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಬುಧವಾರ ಲಕ್ಕೋದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಏನಿದು ರಾಮನಂದಿ ಸಂಪ್ರದಾಯ?
ಜಗದ್ಗುರು ಸ್ವಾಮಿ ರಮಾನಂದಾಚಾರ್ಯರಿಂದ ಸ್ಥಾಪಿತವಾದ ಸಂಪ್ರದಾಯವೇ “ರಾಮನಂದಿ’. ವೈಷ್ಣವ ಪಂಥಗಳ ಪೈಕಿ ಅತಿದೊಡ್ಡ ಪಂಥವೆಂದು ರಾಮನಂದಿಯನ್ನು ಪರಿಗಣಿಸಲಾಗುತ್ತದೆ. ವೈಷ್ಣವರ 52 ಉಪಶಾಖೆಗಳನ್ನು ನಾಲ್ಕು ಪ್ರಮುಖ ಪಂಥಗಳಾಗಿ ವರ್ಗೀಕರಿಸಲಾಗಿದ್ದು, ಈ ಪೈಕಿ ರಾಮನಂದಿ ಪಂಥವು 36 ಶಾಖೆಗಳನ್ನು ಮುನ್ನಡೆಸುತ್ತದೆ. ಭಗವಾನ್ ರಾಮ, ಸೀತಾ, ಹನುಮಂತ ದೇವರನ್ನು ಆರಾಧಿಸುವ ಈ ಪಂಥದಲ್ಲೇ ಆಚಾರ್ಯರಿಗೆ ಜಲಸಮಾಡಿ ಮೂಲಕ ಅಂತ್ಯಕ್ರಿಯೆಯ ನಡೆಸುವ ಸಂಪ್ರದಾಯವಿದೆ.