ಉಡುಪಿ: ಮಲ್ಪೆ ಪ್ರದೇಶದಲ್ಲಿ ಹಿಂದೂ ಯುವ ಸೇನೆಯ ಮುಖಂಡ ಮಂಜುನಾಥ್ ಸಾಲ್ಯಾನ್ (ಮಂಜು ಕೊಳ) ಅವರ ಮೇಲೆ ನಡೆದ ಚಾಕು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಲಿಮಾರು ನಿವಾಸಿಗಳಾದ ಅಮೃತ್ ಭಂಡಾರಿ (22), ಪ್ರಜ್ಞೇಶ್ (22), ಪುನೀತ್ ಪೂಜಾರಿ (24), ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಅಭಿಜಿತ್ (20) ಹಾಗೂ ಓರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಜಗಳದ ಹಿನ್ನೆಲೆಯಲ್ಲಿ ದೂರುದಾರ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ್ ಸಾಲ್ಯಾನ್, ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಆರೋಪಿಗಳು ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡು ಹಲ್ಲೆಗೆ ತಿರುಗಿದೆ.
ಈ ವೇಳೆ ಆರೋಪಿ ಪ್ರಜ್ಞೇಶ್ ತನ್ನ ಬಳಿ ಇದ್ದ ಚಾಕುವಿನಿಂದ ಮಂಜುನಾಥ್ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದು, ಅವರು ತೀವ್ರ ಗಾಯಗೊಂಡಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ವರುಣ್ ಮತ್ತು ಲತೀಶ್ ಅವರಿಗೂ ಗಾಯಗಳಾಗಿವೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣದ ತನಿಖೆಯನ್ನು ಮಲ್ಪೆ ಪೊಲೀಸ್ ಠಾಣೆ ಕೈಗೊಂಡಿದ್ದು, ಪಿಎಸ್ಐ ಈರಣ್ಣ ಶಿರಗುಂಪಿ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಪ್ರಾಪ್ತ ಬಾಲಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.





















