ಪುತ್ತೂರು: ಸ್ಕೂಟರ್ ಡಿಕ್ಕಿಯಲ್ಲಿ ಇಡಲಾಗಿದ್ದ ಚಿನ್ನಾಭರಣ ಕಳವಾಗಿರುವ ಬಗ್ಗೆ ಮಹಿಳೆಯೊಬ್ಬರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಕೋಳ್ತಾಡು ಗ್ರಾಮದ ಬಾರೆಬೆಟ್ಟು ನಿವಾಸಿ ವಸಂತ ಪೂಜಾರಿ ಅವರ ಪತ್ನಿ ದಿವ್ಯ ದೂರುದಾರರು. ಫೆಬ್ರವರಿ 28ರಂದು ಗಂಡನೊಂದಿಗೆ ಸ್ಕೂಟರ್ನಲ್ಲಿ ಸಂಪಾಜೆಯ ತಾಯಿ ಮನೆಗೆ ತೆರಳಿ, ವಾಪಸ್ಸಾಗುವ ವೇಳೆ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಭೇಟಿ ನೀಡಿದ್ದರು.
ಲಗೇಜ್ ಬ್ಯಾಗ್ನಲ್ಲಿದ್ದ ಚಿನ್ನಾಭರಣದ ಪೆಟ್ಟಿಗೆಯನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟು ದೇವಸ್ಥಾನಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ವಾಪಸ್ಸಾದ ಬಳಿಕ ಡಿಕ್ಕಿಯಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ತೆಗೆಯುವುದನ್ನು ಮರೆತಿದ್ದಾರೆ.
ಮರು ದಿನ ಮಾ.1ರಂದು ಬೆಳಿಗ್ಗೆ ಸ್ಕೂಟರ್ ಡಿಕ್ಕಿ ತೆರೆದಾಗ ಚಿನ್ನಾಭರಣ ಹಾಗೂ ಶೇವಿಂಗ್ ಕಿಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಗೆಜ್ಜೆಗಿರಿ ದೇವಸ್ಥಾನಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಶೇವಿಂಗ್ ಕಿಟ್ನಲ್ಲಿದ್ದ ಬಾಚಣಿಗೆ ಅಲ್ಲಿ ಪತ್ತೆಯಾಗಿದೆ.
ಡಿಕ್ಕಿಯಲ್ಲಿ ಇಡಲಾಗಿದ್ದ ಕರಿಮಣಿ ಸರ ಸೇರಿದಂತೆ ಇತರ ಸರಗಳು ಸೇರಿ ಒಟ್ಟು 50 ಗ್ರಾಂ ತೂಕದ, ಅಂದಾಜು ರೂ. 3.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






















