ಬೆಳ್ತಂಗಡಿ: ಚಿನ್ನಾಭರಣ ಶುಚಿಗೊಳಿಸುವುದಾಗಿ ಹೇಳಿ ಅಪರಿಚಿತನೊಬ್ಬ ವೃದ್ಧೆಯ ಚಿನ್ನದ ಸರವನ್ನು ಕರಗಿಸಿ ವಂಚಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ನಡೆದಿದೆ.
90 ವರ್ಷದ ರುಕ್ಮಿಣಿ ಶೆಟ್ಟಿಗಾರ್ ಅವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ, ಫೆಬ್ರವರಿ 10ರಂದು ಬೆಳಿಗ್ಗೆ ಸುಮಾರು 11.15ಕ್ಕೆ ಮನೆಗೆ ಬಂದ ವ್ಯಕ್ತಿಯೊಬ್ಬ “ಚಿನ್ನಾಭರಣ ತೊಳೆಯುತ್ತೇನೆ” ಎಂದು ಹೇಳಿ ನಂಬಿಕೆ ಗಳಿಸಿದ್ದಾನೆ. ಅವರಿಂದ ಎರಡು ಮುಕ್ಕಾಲು ಪವನ್ ತೂಕದ ಲಕ್ಷ್ಮೀ ಪದಕ ಹೊಂದಿದ್ದ ಚಿನ್ನದ ಸರವನ್ನು ಪಡೆದುಕೊಂಡಿದ್ದಾನೆ.
ಅಂಗಳದಲ್ಲಿ ನೀರು ಮತ್ತು ಬ್ರಷ್ ಬಳಸಿ ತೊಳೆಯುವಂತೆ ನಾಟಕವಾಡಿದ ಆತ, ಬಳಿಕ ಸರವನ್ನು ಕಾಗದದಲ್ಲಿ ಸುತ್ತಿ “ಫ್ಯಾನ್ ಗಾಳಿಗೆ ಒಣಗಿಸಿ” ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ. ಅನುಮಾನಗೊಂಡು ಕಾಗದ ತೆರೆಯುತ್ತಿದ್ದಂತೆ, ಸರದ ಬದಲು ಅರಿಶಿನ ಪುಡಿ ಹೋಲುವ ಪದಾರ್ಥ ಹಾಗೂ ತುಂಡಾಗಿದ್ದ ಚಿನ್ನದ ಅವಶೇಷಗಳು ಮಾತ್ರ ಕಂಡುಬಂದಿವೆ. ಲಕ್ಷ್ಮೀ ಪದಕವೂ ತಾಮ್ರದ ಬಣ್ಣಕ್ಕೆ ತಿರುಗಿರುವುದು ಗಮನಕ್ಕೆ ಬಂದಿದೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಚಿತ್ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.






















