ನಡುರಸ್ತೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ನಿಟ್ಟೆಯಲ್ಲಿ ಜ. 23ರಂದು ನಡೆದಿದೆ.
ಅನಿರುದ್ಧ್ ಬಂಗೇರ ಎಂಬಾತನು ಕಾಲೇಜಿನ ಎದುರು ನಿಲ್ಲಿಸಿದ್ದ ತನ್ನ ಕೆಎ-20 ಝಡ್- 0145ನೇ ಕಾರಿನ ಬಳಿ ಬಂದಾಗ ಕಾರಿನ ಮುಂದೆ ಆರೋಪಿತರಾದ ಮಂಥನ್, ಸಮರ್ಥ, ಪ್ರತೀಕ್, ಸ್ವರೂಪ್ ಪೂಂಜ, ಹರ್ಷ ಆಚಾರ್ಯ, ದೀಕ್ಷಿತ್, ಸಿರಿ ಹಾಗೂ ಇನ್ನಿತರರು ನಿಂತಿದ್ದು ಅವರಲ್ಲಿ ಆದರ್ಶ ಪರಪ್ಪಾಡಿ ಹಾಗೂ ಮಂಥನ್, ಅನಿರುದ್ದ್ನನ್ನು ಉದ್ದೇಶಿಸಿ ಆತನ ಕಾರನ್ನು ಅಲ್ಲಿಂದ ತೆಗೆಯದಂತೆ ಜೋರು ಮಾಡುತ್ತಿದ್ದರು. ಈ ವೇಳೆ ಅಶ್ಮಿತ್ ಶೆಟ್ಟಿ ಎಂಬಾತ ಕಾಲೇಜಿನ ಎದುರು ಗಲಾಟೆ ಮಾಡುವುದು ಬೇಡ ಸ್ಟೇಷನ್ ಕಡಗೆ ಹೋಗುವ ಎಂದು ಅನಿರುದ್ಧ್ ಮತ್ತು ಮಂಥನ್ ಹಾಗೂ ಅಲ್ಲಿ ಇದ್ದವರಿಗೆ ತಿಳಿಸಿರುತ್ತಾನೆ. ಅಂತೆಯೇ ಅಲ್ಲಿಂದ ವಂಶ ಪೂಜಾರಿ ಹಾಗೂ ವಿಧೀತ್ನೊಂದಿಗೆ ಅಶ್ಮಿತ್ ಶೆಟ್ಟಿಯ ಕಾರಿನಲ್ಲಿ ಹಾಗೂ ಅನಿರುದ್ದ ಅವನ ಕಾರಿನಲ್ಲಿ ಕಾರ್ಕಳ ಕಡೆಗೆ ಹೊರಟಿದ್ದರು.
ಬೆನ್ನಟ್ಟಿಕೊಂಡು ಹಲ್ಲೆ
ಮಂಥನ್ ಹಾಗೂ ಆತನ ಸ್ನೇಹಿತರು ಎರಡು ಕಾರು ಹಾಗೂ ಒಂದು ಮೋಟಾರ್ ಸೈಕಲ್ನಲ್ಲಿ ಬೆನ್ನಟ್ಟಿಕೊಂಡು ಬಂದು ಕಾರನ್ನು ನಿಲ್ಲಿಸುವಂತೆ ಜೋರಾಗಿ ಕೂಗಾಡುತ್ತಾ ಕಾರಿನ ಕಿಟಿಕಿಯಿಂದ ಬ್ಯಾಟ್ ಹಾಗೂ ಹಾಕಿ ಸ್ಟಿಕ್ಗಳನ್ನು ತೋರಿಸಿ ಕಾರಿನಲ್ಲಿ ಇದ್ದವರಿಗೆ ಹೊಡೆಯಲು ಪ್ರಯತ್ನಿಸಿದ್ದಾರೆ. ಅತ್ತೂರು ಚರ್ಚ್ನಿಂದ ಸ್ವಲ್ಪ ಮುಂದುಗಡೆ ಬರುವಾಗ ಮಂಥನ ಹಾಗೂ ಆತನ ಸ್ನೇಹಿತರು ಅವರ ಕಾರು ಹಾಗೂ ಮೋಟಾರ್ ಸೈಕಲ್ನಿಂದ ಅಶ್ಮಿತ್ ಶೆಟ್ಟಿ ಹಾಗೂ ಅನಿರುದ್ದ ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರಿನ ಬಾಗಿಲನ್ನು ಎಳೆದು ಮಂಥನ ಅನಿರುದ್ದನಿಗೆ ಹಾಕಿ ಸ್ಟಿಕ್ನಿಂದ ಹೊಡೆದಿರುತ್ತಾನೆ. ಈ ವೇಳೆ ಅಶ್ಮಿತ್ ಶೆಟ್ಟಿ ಹಾಗೂ ಅವನ ಸ್ನೇಹಿತರು ಅವರಲ್ಲಿ ಗಲಾಟೆ ಮಾಡಬೇಡಿ ಎಂದು ಹೇಳಿದಾಗ ಅಶ್ಮಿತ್ ಶೆಟ್ಟಿಗೆ ಕೈಯಿಂದ ಹೊಡೆದಿರುತ್ತಾರೆ. ಅಲ್ಲದೆ ಸ್ವರೂಪ ಎಂಬಾತ ಕುತ್ತಿಗೆಗೆ ಕೈ ಹಾಕಿ ಎಳೆದಾಗ ಕುತ್ತಿಗೆಯಲ್ಲಿ ಇದ್ದ ಚಿನ್ನದ ಚೈನ್ ತುಂಡಾಗಿ ಬಿದ್ದು ಹೋಗಿರುತ್ತದೆ. ಈ ವೇಳೆ ಮತ್ತೆ ಹಲ್ಲೆ ಮಾಡಬಹುದು ಎಂದು ಅಶ್ಮಿತ್ ಶೆಟ್ಟಿ ಮತ್ತವರ ಸ್ನೇಹಿತರು ಅಲ್ಲಿಂದ ಪೊಲೀಸ್ ಸ್ಟೇಶನ್ಗೆ ಬರುತ್ತಿರುವಾಗ ಕಸಬಾ ಗ್ರಾಮದ ಮೆಸ್ಕಾಂ ಕಚೇರಿ ಬಳಿ ಆರೋಪಿತರು ಮತ್ತೆ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿ ಹಾಕಿ ಸ್ಟಿಕ್ನಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಜಮಾಯಿಸಿದ್ದನ್ನು ಕಂಡು ಆರೋಪಿತರು ರಾಕೀಬ್ ಎಂಬಾತ ಚಲಾಯಿಸುತ್ತಿದ್ದ ಕೆಎ-20 ಎಮ್ಜಿ-5852ನೇ ನಂಬ್ರದ ಕಾರು ಹಾಗೂ ಇನ್ನೊಂದು ಕಾರು ಮತ್ತು ಬೈಕ್ನಲ್ಲಿ ಅಲ್ಲಿಂದ ಹೋಗಿರುತ್ತಾರೆ.
ಹಿಂದಿನ ದಿನ ಕಾಲೇಜಿನಲ್ಲಿ ಅನಿರುದ್ದ ಮಂಥನನಿಗೆ ಗುರಾಯಿಸಿರುತ್ತಾನೆ ಎಂದು ತಪ್ಪು ತಿಳಿದು ಮಂಥನ ಅವನ ಸ್ನೇಹಿತರನ್ನು ಅಕ್ರಮಕೂಟ ಕೂಡಿಸಿಕೊಂಡು ಎರಡು ಕಾರು ಹಾಗೂ ಎರಡು ಬೈಕ್ಮಲ್ಲಿ ಹಾಕಿ ಸ್ಟಿಕ್ ಬ್ಯಾಟ್ ಹಿಡಿದುಕೊಂಡು ಬಂದು ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಶ್ಮಿತ್ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು
ಘಟನೆ ಬಗ್ಗೆ ಮಂಥನ್ ಪೂಜಾರಿ ನೀಡಿದ ದೂರಿನಲ್ಲಿ, ಕಾಲೇಜಿನಲ್ಲಿ ಆರೋಪಿ ಅನಿರುದ್ದ ಬಂಗೇರ ಗುರಾಯಿಸಿದ್ದು. ಅದೇ ವಿಷಯವಾಗಿ ಜ. 23ರಂದು ಬೆಳಿಗ್ಗೆ ಕಾಲೇಜು ಬಳಿ ಆರೋಪಿತರಾದ ವಂಶ, ಅನಿರುದ್ದ ಬಂಗೇರ, ಅಶ್ಮಿತ್, ನಾಗೀ, ಮನ್ವಿತ್, ವಿದ್ಯುತ್ ಕೂಡಿಕೊಂಡು ಹಲ್ಲೆ ಮಾಡಿರುತ್ತಾರೆ. ಆ ಬಳಿಕ ಆರೋಪಿತರು ಕೆಎ-20 ಎಮ್ ಸಿ-7898 ಹಾಗೂ ಕೆಎ-20 ಝಡ್ -0145 ನೇ ನಂಬ್ರದ ಕಾರಿನಲ್ಲಿ ಮಂಥನ್ ಚಲಾಯಿಸಿಕೊಂಡು ಬರುತ್ತಿದ್ದ ಕೆಎ-20 ಎಮ್ಜಿ-5852ನೇ ನಂಬ್ರದ ಕಾರನ್ನು ಹಿಂಬಾಲಿಸಿಕೊಂಡು ಬಂದು ಕಸಬಾ ಗ್ರಾಮದ ಮೆಸ್ಕಾಂ ಕಛೇರಿ ಬಳಿ ಕಾರನ್ನು ಅಡ್ಡ ಇಟ್ಟು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.





















