ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಸದಸ್ಯ ಅಕ್ಷಯ್ ಕಲ್ಲೇಗ (26) ಕೊಲೆ ಪ್ರಕರಣದ ಮೂರನೇ ಆರೋಪಿ, ಪಡೀಲು ನಿವಾಸಿ ಮಂಜುನಾಥ್ (ಮಂಜು) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ.
ಅಕ್ಷಯ್ ಕಲ್ಲೇಗ ಅವರನ್ನು ಚಿಕ್ಕಮುನ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಮನೀಶ್, ಬನ್ನೂರು ಗ್ರಾಮ ಕೃಷ್ಣ ನಗರದ ಖಾಸಗಿ ಬಸ್ ಚಾಲಕ ಚೇತನ್, ಪಡೀಲು ನಿವಾಸಿ ಮಂಜುನಾಥ್ (ಮಂಜು), ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲು ಸೇರಿ 2023 ರ ನವೆಂಬರ್ 6 ರ ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ಕೊಲೆ ಮಾಡಿದ್ದರು.
ನಾಲ್ವರು ಆರೋಪಿಗಳನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಮಂಜುನಾಥ್, ಅನಾರೋಗ್ಯದ ಕಾರಣ ನೀಡಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದ. ಆದರೆ ಸರಕಾರಿ ಅಭಿಯೋಜಕರು ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ವಾದ ಮಂಡನೆ ಮಾಡಿದ್ದರು. ಇದರ ಪರಿಣಾಮ ನ್ಯಾಯಾಲಯವು ಮಂಜುನಾಥ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.