ಚಾಮರಾಜನಗರ :ಗ್ರಾಮದ ಸಮೀಪ ಕಾಡಿನಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆ ಹಿಡಯಲು ವಿಫಲರಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಿಬ್ಬಂದಿಗಳನ್ನು ಹುಲಿಗೆ ಇಟ್ಟ ಬೋನ್ ನೊಳಗೆ ಗ್ರಾಮಸ್ಥರೇ ಕೂಡಿ ಹಾಕಿದ ಅಪರೂಪದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಉಪಟಳ ಇರುವುದನ್ನು ಗ್ರಾಮಸ್ಥರು ಬಂಡೀಪುರ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಗ್ರಾಮಸ್ಥರ ಮನವಿಯಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯವರು ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಹಿಡಿಯಲು ಬೋನ್ ಕೂಡ ಅಳವಡಿಸಿದ್ದರು. ಆದರೆ ಹುಲಿ ಮಾತ್ರ ಬೋನ್ ಗೆ ಬಿದ್ದಿರಲಿಲ್ಲ. ಇದರಿಂದ ಹತಾಶರಾದ ಗ್ರಾಮಸ್ಥರು ಗ್ರಾಮಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೇ ಹುಲಿಗಿಟ್ಟ ಬೋನ್ ನೊಳಗೆ ಹಾಕಿ ದಿಬ್ಬಂಧನ ಮಾಡಿದ್ದಾರೆ.
ಗ್ರಾಮಸ್ಥರ ಈ ಕ್ರಮದಿಂದ ವಿಚಲಿತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಮ್ಮನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.