ಬಂಟ್ವಾಳ: ಕೊಡ್ಮಾಣಿನ ಯುವಕನೋರ್ವ ಸುಜೀರಿನ ಯುವತಿಗೆ ಹಲ್ಲೆ ನಡೆಸಿದ್ದು, ಆತನ ಮೃತದೇಹ ಹುಡುಗಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಡ್ಮಾಣ್ ನಿವಾಸಿ ಸುಧೀರ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಎಂಬಾಕೆ ಹಾಗೂ ಕೋಡ್ಕನ್ ಗ್ರಾಮ ನಿವಾಸಿ ಸುಧೀರ್ (30) ಎಂಬಾತನು ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿರುತ್ತದೆ. ಆದರೂ ಸಹ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು, ಮಾಡುತ್ತಿದ್ದು, ಪ್ರಕರಣ ಮುಂದುವರಿದಂತೆ ಆರೋಪಿಯು ದಿನಾಂಕ 07/07/2025 ರಂದು ಬೆಳಿಗ್ಗೆ ಫರಂಗಿಪೇಟೆ, ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು ಸದ್ರಿ ದಿವ್ಯಾಳೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿರುತ್ತದೆ. ಈ ವೇಳೆ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾ ನನ್ನು ಸಾಯಿಸಲು ಚುಚ್ಚಿರುತ್ತಾನೆ. ಆಕೆ ತಪ್ಪಿಸಿಕೊಂಡು ಹೋಗುತ್ತಾ ಬಿದ್ದಾಗ, ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಆರೋಪಿಯು ಅಲ್ಲಿಂದ ತೆರಳಿ ದಿವ್ಯಾಳ ಬಾಡಿಗೆ ಮನೆಗೆ ಹೋಗಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು