ಪುತ್ತೂರು: ಅತ್ಯಾಚಾರ ಪ್ರಕರಣದಡಿ ಆರೋಪಿ ಶ್ರೀಕೃಷ್ಣ ರಾವ್ ಬಂಧನದ ಬೆನ್ನಿಗೇ ಆರೋಪಿಯ ತಂದೆ, ಪುತ್ತೂರು ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ಬಂಧಿಸಲಾಗಿದೆ.
ಅರೊಪಿ ಪರಾರಿಯಾಗಲು ಸಹಕರಿಸಿದ ಆರೋಪದ ಮೇಲೆ ಪಿ.ಜಿ. ಜಗನ್ನಿವಾಸ ರಾವ್ (53) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿ ಕೃಷ್ಣಾ ಜೆ. ರಾವ್ ತನ್ನ ಹೈಸ್ಕೂಲ್ ಸಹಪಾಠಿಯನ್ನೇ ಪ್ರೀತಿಸುವ ನಾಟಕವಾಡಿದ್ದು, ವಿವಾಹದ ಆಮಿಷವೊಡ್ಡಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತ ಯುವತಿ ಜುಲೈ 24 ರಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿತ್ತು.
ಪರಾರಿಯಾಗಲು ತಂದೆಯ ಸಾಥ್!
ಪ್ರಕರಣ ದಾಖಲಾಗುವ ಸುಳಿವು ಸಿಗುತ್ತಿದ್ದಂತೆ ಕೃಷ್ಣಾ ರಾವ್, ತಂದೆ ಜಗನ್ನಿವಾಸ ರಾವ್ ಅವರ ಸಹಾಯದಿಂದ ಮೈಸೂರಿನ ಟಿ. ನರಸೀಪುರದಲ್ಲಿ ತಲೆಮರೆಸಿಕೊಂಡಿದ್ದ. ಇದೇ ವೇಳೆ, ಮಗನ ಮೇಲೆ ದೂರು ದಾಖಲಾದ ಎರಡು ದಿನಗಳಲ್ಲಿ ಜಗನ್ನಿವಾಸ ರಾವ್ ಅವರು ಆರೋಗ್ಯದಲ್ಲಿ ಏರುಪೇರು ಎಂದು ಹೇಳಿ ನಗರದ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಬೆಳಿಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ ಅವರು, ರಾತ್ರಿಯಾಗುತ್ತಲೇ ಆಸ್ಪತ್ರೆ ಸೇರಿದ್ದು ತೀವ್ರ ಅನುಮಾನಕ್ಕೆ ಕಾರಣವಾಗಿತ್ತು.
ಇದರ ಬೆನ್ನಲೇ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದು ಆಸ್ಪತ್ರೆಯಲ್ಲೇ ಪೊಲೀಸ್ ಕಾವಲು ನಿಯೋಜಿಸಿದ್ದರು ಎಂದು ತಿಳಿದು ಬಂದಿದೆ.