ಪುತ್ತೂರು: ಕಳೆದ ಏಪ್ರಿಲ್ ತಿಂಗಳಲ್ಲಿ ವನ್ಯಜೀವಿ ಬೇಟೆಯಾಡಿ, ಅದರ ಮಾಂಸವನ್ನು ದಾಸ್ತಾನಿರಿಸಿದ ಪ್ರಕರಣದ ಆರೋಪಿಗೆ ದ.ಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು ನಿರೀಕ್ಷಣ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.
ಕಳೆದ 20-04- 2025ರಂದು, ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಲೆಂಜಾಲು ನಿವಾಸಿ ವರ್ಗಿಸ್ ಥಾಮಸ್ ಎಂಬವರ ಮನೆಯಲ್ಲಿ ವನ್ಯಪ್ರಾಣಿಯ ಮಾಂಸದ ತುಂಡುಗಳನ್ನು ದಾಸ್ತಾನಿಟ್ಟಿರುವ ಬಂದ ಮಾಹಿತಿ ಆಧರಿಸಿ, ಪಂಜ ವಲಯದ ಕಡಬ ಅರಣ್ಯಾಧಿಕಾರಿಗಳು ಆರೋಪಿ ಮನೆಗೆ ದಾಳಿ ನಡೆಸಿದ್ದರು. ಮನೆಯ ರೆಫ್ರಿಜರೇಟರ್ ಒಳಗಡೆ ಹಸಿ ಮಾಂಸ ಪತ್ತೆಯಾಗಿ ಬಳಿಕ ಆರೋಪಿ ಪರಾರಿಯಾಗಿದ್ದ.
ಕೃತ್ಯಕ್ಕೆ ಉಪಯೋಗಿಸಿದ್ದ ಕೋವಿ, ವಾಹನವನ್ನು ಮತ್ತು ಹಸಿ ಮಾಂಸವನ್ನು ವಶಕ್ಕೆ ಪಡೆದುಕೊಂಡು, ಆರೋಪಿ ವರ್ಗೀಸ್ ಥಾಮಸ್ ವಿರುದ್ಧ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರನ್ವಯ ಮೊಕದ್ದಮೆ ದಾಖಲಿಸಿ, ಪುತ್ತೂರು ನ್ಯಾಯಾಲಯಕ್ಕೆ ಅರಣ್ಯ ಅಧಿಕಾರಿಗಳು ವರದಿಯನ್ನು ನೀಡಿದ್ದರು. ನಂತರ ವನ್ಯಜೀವಿ ಬೇಟೆಯಾದ ಬಗ್ಗೆ ತನಿಖೆಯನ್ನು ಕೈಗೊಂಡು, ಅರಣ್ಯ ಅಧಿಕಾರಿಗಳು ಆರೋಪಿಯನ್ನು ಹುಡುಕುವವರಾಗಿದ್ದರು.
ಇದೀಗ ಈ ಪ್ರಕರಣದಲ್ಲಿ ದ.ಕ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪುತ್ತೂರು ಪೀಠದ ನ್ಯಾಯಾಧೀಶೆ ಸರಿತಾ ಡಿ. ಅವರು, ಆರೋಪಿಗೆ ಶರ್ತಬದ್ಧ ನಿರೀಕ್ಷಣ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಈ ಪ್ರಕರಣದ ಆರೋಪಿ ವರ್ಗೀಸ್ ಥಾಮಸ್ ಅವರು, ತಾನು ನಿರಪರಾಧಿ, ಈ ಪ್ರಕರಣಕ್ಕೂ ಮತ್ತು ತನಗೆ ಯಾವುದೇ ಸಂಬಂಧವಿಲ್ಲ, ಆನೆ ಕಾರಿಡಾರ್ ನಿರ್ಮಿಸುವ ವಿಚಾರದಲ್ಲಿ ತನಗೂ ಮತ್ತು ತನ್ನ ರಾಜಕೀಯ ವೈರಿಗಳಿಗೂ ದ್ವೇಷವಿರುವುದರಿಂದ, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂಬ ವಾದವನ್ನು ಮುಂದಿಟ್ಟು, ತನ್ನ ವಕೀಲರ ಮೂಲಕ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆರೋಪಿ ಪರವಾಗಿ ಹಿರಿಯ ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಸಾತ್ವಿಕ್ ಆರಿಗ ಬಿ ವಾದಿಸಿದ್ದರು.