ಬೆಂಗಳೂರು: ಅಪ್ರಾಪ್ತ ಅನಾಥೆಯೊಬ್ಬಳಿಗೆ ಜೀವನ ಕೊಡುವ ಉದ್ದೇಶದಿಂದ ಮದುವೆಯಾದ ಪರಿಣಾಮ ಪೋಕ್ಸ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಈಡಾಗಿರುವ ವ್ಯಕ್ತಿಯ ರಕ್ಷಣೆಗೆ ಮುಂದಾಗಿರುವ ಹೈಕೋರ್ಟ್, ಅಪ್ರಾಪ್ತ ಸಂತ್ರಸ್ತೆಯ ಪ್ರಮಾಣಪತ್ರ ಆಧರಿಸಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಮತ್ತು ಕೋಲಾರದ ತ್ವರಿತಗತಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸೂಕ್ತ ಕಾರಣವಿಲ್ಲದೆ ಪತ್ನಿ ತ್ಯಜಿಸಿದರೆ ಮತ್ತೆ ವಿಚಾರಣೆ: ಈ ಪ್ರಕರಣದಲ್ಲಿ ಅರ್ಜಿದಾರರ ಪತ್ನಿಗೆ ಪೋಷಕರಿಲ್ಲ. ಜೊತೆಗೆ, ಇಡೀ ಕುಟುಂಬಕ್ಕೆ ಅರ್ಜಿದಾರರೇ ಜೀವನಾಧಾರವಾಗಿದ್ದಾರೆ. ಪ್ರಕರಣವನ್ನು ಮುಂದುವರಿಸಿದಲ್ಲಿ ಅರ್ಜಿದಾರರು ಮತ್ತವರ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅರ್ಜಿದಾರರನ್ನು ಪ್ರಕರಣದಿಂದ ಖುಲಾಸೆ ಮಾಡಬಹುದಾಗಿದೆ ಎಂಬುದಾಗಿ ಖುದ್ದು ಅವರ ಪತ್ನಿ ಪ್ರಮಾಣಪತ್ರ ಸಲ್ಲಿಸಿದ್ದು, ಇದೊಂದೇ ಕಾರಣದಿಂದ ಪ್ರಕರಣವನ್ನು ರದ್ದಪಡಿಸಲಾಗುತ್ತಿದೆ.