ಕಾಸರಗೋಡು: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಶವವಾಗಿ ಪತ್ತೆ ಆಗಿರುವಂತಹ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ಬಳಿ ನಡೆದಿದೆ.
ಮಂಡೆಕಾಪುವಿನ ಪ್ರಿಯೇಶ್ – ಚಂದ್ರಾವತಿ ದಂಪತಿ ಪುತ್ರಿ ಶ್ರೇಯಾ ( 15) ಮತ್ತು ಆಟೋ ಚಾಲಕ ಪ್ರದೀಪ್ (42) ಮೃತಪಟ್ಟವರು. ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10. 30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದರು. ಆದರೆ ತಿಂಗಳಾಗುತ್ತಾ ಬಂದರೂ ಇಬ್ಬರ ಬಗ್ಗೆ ಯಾವುದೇ ಸುಳಿವು ಲಭಿಸದ ಹಿನ್ನಲೆಯಲ್ಲಿ ಶನಿವಾರದಿಂದ ಪೊಲೀಸರು ಹಾಗೂ ಸ್ಥಳೀಯರು ಮನೆ ಪರಿಸರದ ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದು, ಇಬ್ಬರ ಮೃತದೇಹ ಒಂದೇ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಒಂದು ಚಾಕು ಮತ್ತು ಎರಡು ಮೊಬೈಲ್ ಫೋನ್ಗಳು ಪತ್ತೆಯಾಗಿದೆ.
ಫೆಬ್ರವರಿ 11 ರ ರಾತ್ರಿಯಿಂದ ಶ್ರೇಯಾ ದಿಢೀರ್ ನಾಪತ್ತೆಯಾಗಿದ್ದಳು. ಇದರ ಜೊತೆಗೆ ಪ್ರದೀಪ್ ನಾಪತ್ತೆಯಾಗಿದ್ದು, ಇಬ್ಬರು ಪರಾರಿಯಾಗಿರಬಹುದೆಂದು ಶಂಕಿಸಲಾಗಿತ್ತು. ಮೊಬೈಲ್ ಟವರ್ ಕೇಂದ್ರೀಕರಿಸಿ ಮನೆ ಪರಿಸರ ಕಾಡು ಹಾಗೂ ಮನೆ ಕೇಂದ್ರೀಕರಿಸಿ ತನಿಖೆ ನಡೆಸಿದ್ದರು.ಪ್ರದೀಪ್ ನ ಸಂಬಂಧಿಕರ ಮನೆ ಮಡಿಕೇರಿಗೂ ತೆರಳಿ ಪೊಲೀಸರು ಈ ಹಿಂದೆ ತನಿಖೆ ನಡೆಸಿದ್ದರು. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು. ಶ್ರೇಯಾ ಸ್ಥಳೀಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು.