ಬೆಂಗಳೂರು: ಕಮಲ್ ಹಾಸನ್ ಅವರ ʼಥಗ್ ಲೈಫ್ʼ ಸಿನಿಮಾವನ್ನು ರಾಜ್ಯದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಬೇಕೆಂದು ಕೋರಿ ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ(ಜೂ.3) ನಡೆಯಿತು.
ಇತ್ತೀಚೆಗೆ ಸಿನಿಮಾದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ʼʼಕನ್ನಡ ಹುಟ್ಟಿದ್ದು, ತಮಿಳಿನಿಂದ” ಎನ್ನುವ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳದೆ ಇದ್ರೆ, ಅವರ ʼಥಗ್ ಲೈಫ್ʼ ಸಿನಿಮಾವನ್ನು ರಿಲೀಸ್ ಮಾಡಲು ಬಿಡುವುದಿಲ್ಲವೆಂದು, ಈ ವಿಚಾರದಲ್ಲಿ ಫಿಲಂ ಚೇಂಬರ್ ಖಡಕ್ ಎಚ್ಚರಿಕೆಯನ್ನು ನೀಡಿದೆ. ಆದರೆ ಇದುವರೆಗೆ ಕಮಲ್ ಹಾಸನ್ ಕ್ಷಮೆ ಕೇಳಿಲ್ಲ.
ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ʼಥಗ್ ಲೈಫ್ʼ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದೆ.
ಈ ಅರ್ಜಿಯ ವಿಚಾರಣೆ ನ್ಯಾ. ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಲ್ಲಿ ನಡೆದಿದೆ.
ನಿಮ್ಮ ಹೇಳಿಕೆಯಿಂದ ಶಿವರಾಜ್ ಕುಮಾರ್ ಅವರು ಸಮಸ್ಯೆ ಅನುಭವಿಸುವಂತಾಗಿದೆ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಿ. ಬೇರೆಯವರ ಭಾವನೆಗೆ ಧಕ್ಕೆ ತಂದು ಸಿನಿಮಾ ಬಿಡುಗಡೆಗೆ ಕೇಳುತ್ತಿದ್ದೀರಿ. ಆದೇಶ ಹೊರಡಿಸುವುದಕ್ಕೆ ನಮಗೆ ಸಮಸ್ಯೆ ಇಲ್ಲ ಕ್ಷಮೆ ಕೇಳದಿದ್ರೆ ಬಿಡಿ, ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಯಾಕೆ ಮಾಡಬೇಕು? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
300 ಕೋಟಿ ಸಿನಿಮಾ ಎನ್ನುತ್ತಿದ್ದೀರಾ. ಕ್ಷಮೆ ಯಾಚಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
1950ರಲ್ಲಿ ಬಂದಿದ್ದ ʼಕಾಳʼ ಸಿನಿಮಾದ ವೇಳೆ ಹಿರಿಯ ರಾಜಕಾರಣಿ, ಲೇಖಕ ಸಿ. ರಾಜಗೋಪಾಲಾಚಾರಿ ಅವರು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಆಗ ಅವರು ಕೊನೆಗೂ ಕ್ಷಮೆ ಕೇಳಿದ್ದರು ಎಂದು ನ್ಯಾಯಾಧೀಶರು ಉದಾಹರಣೆಯನ್ನು ನೀಡಿದ್ದಾರೆ.
ಇದೇ ವೇಳೆ ನಾನು ಕೂಡ ʼಥಗ್ ಲೈಫ್ʼ ಸಿನಿಮಾವನ್ನು ನೋಡಬೇಕೆಂದು ಬಯಸಿದ್ದೆ ಎಂದು ನಾಗಪ್ರಸನ್ನ ಹೇಳಿದ್ದಾರೆ.
ಒಂದು ಹೇಳಿಕೆಯಿಂದ ಸಮಸ್ಯೆ ಬಗೆಹರಿಯಬಹುದು.ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದ್ದರು.