ಪುತ್ತೂರು: ಸನ್ ಮ್ಯಾಟ್ರಿಕ್ಸ್ ಬ್ಯಾನರಿನಡಿ ತಯಾರಾದ ಕೆ. ಸತ್ಯೇಂದ್ರ ಪೈ ನಿರ್ಮಾಣದ ಬಹುನಿರೀಕ್ಷಿತ ಸ್ಕೂಲ್ ಲೀಡರ್ ಸಿನಿಮಾ ಮೇ 30ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾದ ನಿರ್ದೇಶಕ ರಝಾಕ್ ಪುತ್ತೂರು, ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಚಿತ್ರದ ಓಟು ಓಟು… ಎಂಬ ಹಾಡು ಜನಪ್ರಿಯವಾಗಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹೈಸ್ಕೂಲ್ ಮಕ್ಕಳ ಮನೋ ವಿಕಾಸ, ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಗಂಭೀರ ಕಥೆಯನ್ನು ಹಾಸ್ಯದ ಲೇಪನದೊಂದಿಗೆ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಹೇಳಿದರು.
ಶಾಲಾ ಚುನಾವಣೆಯನ್ನು ಆಧರಿಸಿದ ಸಿನಿಮಾ ಇದಾಗಿರುವುದರಿಂದ, ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 25 ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತುಳು ಚಿತ್ರರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ ಮುಂತಾದವರು ಹೊಸ ಬಗೆಯ ಹಾಸ್ಯ ಮತ್ತು ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಟ್ಟರೆ, ಕನ್ನಡದ ಹಿರಿಯ ನಟ ರಮೇಶ್ ಭಟ್ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಚಿತ್ರ ನಿರ್ಮಾಣದ ಮೇಲ್ವಿಚಾರಣೆಯನ್ನು ಮೂರು ಮುತ್ತು ನಾಟಕ ಖ್ಯಾತಿಯ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸುವುದರ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯದ ಜೊತೆಗೆ ಸರಕಾರಿ ಶಾಲೆಗಳ ಮೇಲಾಗುತ್ತಿರುವ ಪರಿಣಾಮ ಮತ್ತು ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ. ಈ ಸಿನಿಮಾ ಎಲ್ಲಾ ವಯೋಮಾನದ ಸಿನಿಪ್ರಿಯರ ಮನ ತಲುಪುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಹಾಗೂ ಸಹ ನಿರ್ಮಾಪಕ ಸುದರ್ಶನ್ ಶಂಕರ್ ಮಾತನಾಡಿ, ಕೆ. ಸತ್ಯೇಂದ್ರ ಪೈ ಅವರ ಗಂಧದ ಕುಡಿ ಚಿತ್ರ ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡು 22 ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿತ್ತು. ಈ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು ಅವರು ಈ ಸಿನಿಮಾಕ್ಕೆ ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು ಬರೆದಿದ್ದಾರೆ ಎಂದರು.
ನಾಯಕಿ ನಟಿ ದೀಕ್ಷಾ ಡಿ. ರೈ ಮಾತನಾಡಿ, ಹೈಸ್ಕೂಲ್ ಮಕ್ಕಳನ್ನು ಪ್ರಮುಖವಾಗಿಟ್ಟುಕೊಂಡ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ ಸಹಕಾರ ಯಾಚಿಸಿದರು.
ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಸಹ ನಿರ್ದೇಶಕ ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.