ಮೈಸೂರು: ಕಿಡಿಗೇಡಿಗಳ ಕೃತ್ಯದಿಂದ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ದಿನವಿಡೀ ಹೊತ್ತಿ ಉರಿದ ಪರಿಣಾಮ 100 ಎಕರೆಯಷ್ಟು ಅರಣ್ಯ ಪ್ರದೇಶ ನಾಶವಾಗಿದೆ.
ಉತ್ತನಹಳ್ಳಿ ಮಾರ್ಗದಲ್ಲಿ ಬರುವ ಬೆಟ್ಟದ ಪ್ರದೇಶ ಹಾಗೂ ಲಲಿತಾದ್ರಿಪುರದ ಭಾಗದ ಎರಡು ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬೆಂಕಿಯು ಇಡೀ ಬೆಟ್ಟವನ್ನು ಆವರಿಸಿದೆ. ಅರಣ್ಯ ಇಲಾಖೆ, ಅಗ್ನಿಶಾಮಕದಳ 50ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರೂ ಸಾಧ್ಯವಾಗಿಲ್ಲ. ರಾತ್ರಿಯೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು. ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ.
ಜಂಟಿ ಕಾರ್ಯಾಚರಣೆ:
ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಮೊದಲು ಅರಣ್ಯ ಇಲಾಖೆ ಸಿಬ್ಬಂದಿ 4-5 ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದರು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯವರ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು. 9 ಫೈಯರ್ ಎಂಜಿನ್ಗಳನ್ನು ಬಳಸಿಕೊಂಡು, ಬೆಂಕಿ ನಿಯಂತ್ರಣಕ್ಕೆ ತರಲಾಗುತ್ತಿದ್ದು, ಬೆಂಕಿ ನಂದಿಸುವ ಪ್ರಕ್ರಿಯೆ ರಾತ್ರಿಯು ಮುಂದುವರಿದಿದೆ ಎಂದು ಡಿಸಿಎಫ್ ಬಸವರಾಜು ಮಾಹಿತಿ ನೀಡಿದರು.