ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಕ್ಲೋತ್ ಬ್ಯಾಂಕ್ ಉದ್ಘಾಟನೆ ಡಿ. 10ರಂದು ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಕುಸುಮ್’ರಾಜ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಜಿಲ್ಲೆಯ 3181ರ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಅವರು ಡಿಸೆಂಬರ್ 10, ಬುಧವಾರ ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ. ಈ ಭೇಟಿಯ ಅಂಗವಾಗಿ ಹಲವು ಸೇವಾ ಚಟುವಟಿಕೆಗಳನ್ನು ಅನಾವರಣಗೊಳಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸರಕಾರಿ ಆಸ್ಪತ್ರೆಯಲ್ಲಿ ‘ರೋಟರಿ ಕ್ಲೋತ್ ಬ್ಯಾಂಕ್’ ಉದ್ಘಾಟನೆ ನಡೆಯಲಿದೆ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ ದಾಖಲಾಗುವ ಬಡ ರೋಗಿಗಳಿಗೆ ಅಗತ್ಯವಾಗುವ ಬಟ್ಟೆ-ಬರೆಯ ಪೂರೈಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ ‘ರೋಟರಿ ಕ್ಲೋತ್ ಬ್ಯಾಂಕ್’ ಅನ್ನು ಉದ್ಘಾಟಿಸಲಾಗುತ್ತಿದೆ. ಈ ಯೋಜನೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಧುರಾಜ್ ಅವರ ಸಲಹೆ ಹಾಗೂ ರೋಟರಿ ಯುವದ ಸದಸ್ಯರ ಸಹಯೋಗದಿಂದ ಸಾಕಾರಗೊಳ್ಳುತ್ತಿದೆ. ಮುಂದೆ ನವಜಾತ ಶಿಶುಗಳಿಗೆ ಅಗತ್ಯವಾದ ಬಟ್ಟೆಗಳ ಬ್ಯಾಂಕ್ ಕೂಡ ಆರಂಭಿಸಲಾಗುವುದು ಎಂದರು.
ಬಲ್ನಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ರೋಟರಿ ಯುವದಿಂದ ರೂಪಾಯಿ ಒಂದು ಲಕ್ಷ ದೇಣಿಗೆಯನ್ನು ಹಸ್ತಾಂತರ ಮಾಡಲಾಗುತ್ತದೆ ಎಂದರು.
ಸಂಜೆ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿಕೆ ಅವರ ಜೊತೆ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ರೋನಲ್ ಲೆಫ್ಟಿನೆಂಟ್ ಭರತ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸೇವಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 3 ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ಅರೆ ಭಾಷೆ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಯು.ಪಿ. ಶಿವಾನಂದ, ಮಿಷನ್ ಸ್ವಚ್ಛ ಪುತ್ತೂರಿನ ಪ್ರಮುಖರಾದ ಡಾ. ರಾಜೇಶ್ ಬೆಜ್ಜಂಗಳ, ಗಾಂಧಾರಿ ವಿದ್ಯೆ ಖ್ಯಾತಿಯ ಕುಮಾರಿ ಶಮಿಕ ಇವರನ್ನು ಅಭಿನಂದಿಸಲಾಗುವುದು ಎಂದರು.
ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, ಪೂರ್ವಾಧ್ಯಕ್ಷ ಉಮೇಶ್ ನಾಯಕ್, ನಿಯೋಜಿತ ಅಧ್ಯಕ್ಷೆ ವಚನಾ ಜಯರಾಂ, ಕಾರ್ಯದರ್ಶಿ ಅಭೀಷ್ ಕೆ. ಉಪಸ್ಥಿತರಿದ್ದರು.





















