ಯುಎಇ ದೇಶದ ದುಬೈನಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ ಪತನವಾಗಿದ್ದ HAL ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿದ್ದ ಪೈಲಟ್ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ವಾಯುಪಡೆಯು, “ಇಂದು ದುಬೈ ಏರ್ ಶೋನ ವೈಮಾನಿಕ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆಗೆ ಸೇರಿದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಪೈಲಟ್ ಗಂಭೀರವಾಗಿ ಗಾಯಗೊಂಡು ದುರ್ಬಾಗ್ಯವಶಾತ್ ಸಾವನ್ನಪ್ಪಿದ್ದಾರೆ. ಈ ದುಃಖದ ಸಂದರ್ಭದಲ್ಲಿ ಭಾರತೀಯ ವಾಯುಪಡೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು, ಮೃತ ಪೈಲಟ್ ಅವರ ಕುಟುಂಬದೊಂದಿಗೆ ಭಾವಪೂರ್ವಕವಾಗಿ ಸಹಾನುಭೂತಿ ವ್ಯಕ್ತಪಡಿಸುತ್ತದೆ” ಎಂದು ಪೋಸ್ಟ್ ಮಾಡಿದೆ.
ಎರಡನೇ ಬಾರಿಗೆ ಪತನವಾದ ತೇಜಸ್ ವಿಮಾನ
ಸುದ್ದಿ ಸಂಸ್ಥೆ ಎಪಿ ವರದಿಯ ಪ್ರಕಾರ, ಇಂದು ಸ್ಥಳೀಯ ಸಮಯ ಮಧ್ಯಾಹ್ನ 2:10ರ ಸುಮಾರಿಗೆ ದುಬೈ ವಾಯು ಪ್ರದರ್ಶನದಲ್ಲಿ, ತೇಜಸ್ ಯುದ್ಧ ವಿಮಾನವು ಜನಸಮೂಹದ ಮುಂದೆ ಪ್ರದರ್ಶನ ನೀಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. HAL ತಯಾರಿಸಿದ ಈ ತೇಜಸ್ ವಿಮಾನವು ಭಾರತೀಯ ವಾಯುಪಡೆಗೆ ಬಹುಮುಖ್ಯವಾದ ಸ್ವದೇಶಿ ಯುದ್ಧವಿಮಾನವಾಗಿದ್ದ ಕಾರಣದಿಂದ ಘಟನೆಯು ಆತಂಕ ಸೃಷ್ಟಿಸಿದೆ.
ತನಿಖೆ
ಇನ್ನು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯು ತನಿಖೆಗೇಂದು ಆಯೋಗವನ್ನು ರಚಿಸಿ, ಅಪಘಾತದ ಮೂಲ ಕಾರಣವನ್ನು ಪತ್ತೆಹಚ್ಚುವ ಪ್ರಕ್ರಿಯೆ ಆರಂಭಿಸಲು ಮುಂದಾಗಿದೆ. ಅದರಂತೆ, ಅಪಘಾತಕ್ಕೆ ವಿಮಾನ ತಂತ್ರಜ್ಞಾನ, ನಿರ್ವಹಣಾ ದೋಷ ಅಥವಾ ಮನುಷ್ಯನ ತಪ್ಪು ಸೇರಿದಂತೆ ಪ್ರತಿಯೊಂದು ಅಂಶವನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ ಎನ್ನಲಾಗಿದೆ.
ಏತನ್ಮಧ್ಯೆ, ತೇಜಸ್ ವಿಮಾನ ಅಪಘಾತಕ್ಕೀಡಾಗಿರುವುದು ಇದು ಎರಡನೇ ಬಾರಿ. ಮೊದಲಿನ ಘಟನೆ 2024ರಲ್ಲಿ ಜೈಸಲ್ಮೇರ್ನಲ್ಲಿ ಸಂಭವಿಸಿದ್ದು, ಅಲ್ಲಿ ಎಂಜಿನ್ ವೈಫಲ್ಯದ ಕಾರಣದಿಂದ ವಿಮಾನ ಪತನವಾಗಿತ್ತು.



























