ಪುತ್ತೂರು: ಇಲ್ಲಿನ ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕದಲ್ಲಿರುವ ಹೊಟೇಲ್ ಮುಂಭಾಗದ ಪಾರ್ಕಿಂಗ್’ನಲ್ಲಿ ಇಟ್ಟಿದ್ದ ಪೊಲೀಸ್ ಬ್ಯಾರಿಕೇಡನ್ನು ತೆರವುಗೊಳಿಸಲಾಗಿದೆ.
ಸಾರ್ವಜನಿಕ ಸ್ವತ್ತು ದುರುಪಯೋಗ ಆಗುತ್ತಿರುವ ಬಗ್ಗೆ ಶಕ್ತಿ ನ್ಯೂಸ್ ವರದಿ ಮಾಡಿದ್ದು, ಪುತ್ತೂರು ನಗರ ಸಂಚಾರ ಪೊಲೀಸರು ತಕ್ಷಣ ಸ್ಪಂದಿಸಿದ್ದಾರೆ.
ಪೊಲೀಸ್ ಬ್ಯಾರಿಕೇಡನ್ನು ಖಾಸಗಿ ಉದ್ಯಮಗಳ ಪಾರ್ಕಿಂಗಿಗೆ ಬಳಸಿಕೊಳ್ಳಲಾಗಿತ್ತು. ಸಾರ್ವಜನಿಕ ಸ್ವತ್ತಾದ ಬ್ಯಾರಿಕೇಡನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಸುಗಮಕ್ಕೆ, ಜನದಟ್ಟಣೆ ನಿಯಂತ್ರಣಕ್ಕೆ ಬಳಸಿಕೊಳ್ಳಬೇಕು. ಆದರೆ ಹೋಟೆಲೊಂದರ ಮುಂಭಾಗ ಬ್ಯಾರಿಕೇಡ್ ಹಾಕಿದ್ದು, ಇದರ ಬಗ್ಗೆ ‘ಶಕ್ತಿ ನ್ಯೂಸ್’ ವರದಿ ಮಾಡಿತ್ತು.
ಅಂದ ಹಾಗೇ, ಯಾವುದೇ ವಾಣಿಜ್ಯ ಸಂಕೀರ್ಣದ ಮುಂಭಾಗದ ಜಾಗ ನಗರಸಭೆಯ ಸ್ವತ್ತು. ಅದು ವಾಣಿಜ್ಯ ಸಂಕೀರ್ಣದ ಮಾಲಕರ / ಸಿಬ್ಬಂದಿಗಳ / ಗ್ರಾಹಕರ ಪಾರ್ಕಿಂಗ್’ಗಾಗಿ ಮೀಸಲಿಟ್ಟ ಜಾಗ ಅಲ್ಲವೇ ಅಲ್ಲ. ಇದರ ಬಗ್ಗೆ ಕೋರ್ಟ್ ಆದೇಶವನ್ನು ಹೊರಡಿಸಿದೆ. ಇದರ ಬಗ್ಗೆ ಅರಿವಿದ್ದರೂ ನಗರಸಭೆ ಇದುವರೆಗೆ ಪಾರ್ಕಿಂಗ್’ಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗಲೇ ಇಲ್ಲ.
ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ಅದರ ಪಕ್ಕದಲ್ಲೇ ಇರುವ ಹೊಟೇಲ್ ಮುಂಭಾಗದಲ್ಲಿ ಪಾರ್ಕಿಂಗ್ ಹಾಗೂ ಬಸ್ ನಿಲ್ದಾಣಕ್ಕೆ ಬರುವ ವಾಹನಗಳನ್ನು ನಿಯಂತ್ರಿಸಲಾಗಿದೆ. ಸಾರ್ವಜನಿಕ ವಲಯದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಪುತ್ತೂರು ವರ್ತಕ ಸಂಘ ಹಲವಾರು ಬಾರಿ ಮನವಿ ನೀಡಿದೆ. ಹಾಗಿದ್ದು ಪ್ರಯೋಜನ ಮಾತ್ರ ಶೂನ್ಯ. ಪರಿಣಾಮ ಬಸ್ ನಿಲ್ದಾಣಕ್ಕೆ ಹಾಗೂ ಹೋಟೆಲ್’ಗೆ ಬರುವ ಪ್ರಯಾಣಿಕರು / ಗ್ರಾಹಕರು ಎದುರಿನ ರಸ್ತೆಯಲ್ಲೇ ವಾಹನ ನಿಲ್ಲಿಸಬೇಕಾಗಿದೆ. ಮೊದಲೇ ಕಿರಿದಾದ ಈ ರಸ್ತೆ, ಕೆ.ಎಸ್.ಆರ್.ಟಿ.ಸಿ, ಹೋಟೆಲ್ ಹಾಗೂ ಲಾಡ್ಜ್’ನ ಕ್ರಮದಿಂದ ಇನ್ನಷ್ಟು ದಟ್ಟಣೆ ಎದುರಿಸುವಂತಾಗಿದೆ.
ಮುಂದಿನ ದಿನಗಳಲ್ಲಿ ಕೆ.ಎಸ್.ಆರ್.ಟಿ.ಸಿ, ಹೋಟೆಲ್ ಹಾಗೂ ಲಾಡ್ಜ್ ಮುಂಭಾಗದ ನಿಯಂತ್ರಕವನ್ನು ತೆರವು ಮಾಡುವುದು ಪುತ್ತೂರಿನ ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಒಳಿತು. ಇಲ್ಲದೇ ಹೋದರೆ ಪ್ರತಿ ಅಂಗಡಿಗಳು ಇದೇ ಕ್ರಮವನ್ನು ಅನುಸರಿಸಿದರೆ, ನಗರಸಭೆ ಹಾಗೂ ಸಂಚಾರಿ ಪೊಲೀಸ್ ಇಲಾಖೆಗೆ ಮಾತ್ರವಲ್ಲ ಪುತ್ತೂರಿನ ನಾಗರಿಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಲಿದೆ.
ಪಾರ್ಕಿಂಗ್ ಪ್ಲಾನ್’ನಲ್ಲಿ ಸೂಕ್ತ ಕ್ರಮ:
ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗದ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಆಲೋಚನೆ ಇದೆ. ಪುತ್ತೂರು ನಗರ ಪಾರ್ಕಿಂಗ್ ಪ್ಲಾನ್ ಕೂಡ ಸಿದ್ಧವಾಗುತ್ತಿದ್ದು, ಈ ಯೋಜನೆಯಲ್ಲಿ ಬಸ್ ನಿಲ್ದಾಣ ಮುಂಭಾಗದ ಜಾಗವನ್ನು ಸೇರಿಸಿಕೊಳ್ಳಲಾಗುವುದು.
- ಮಧು ಎಸ್. ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ