ಪುತ್ತೂರು: ಅತಿವೃಷ್ಟಿಯಿಂದ ಅಡಿಕೆ ಕೃಷಿಕರು ಅಪಾರ ಕೃಷಿ ಹಾನಿ ಅನುಭವಿಸುತ್ತಿದ್ದಾರೆ. ಅವರಿಗೆ ಕೇರಳ ಮಾದರಿಯ ಪರಿಹಾರ ನೀಡುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇ. 33ಕ್ಕಿಂತ ಹೆಚ್ಚು ಅಡಿಕೆ ಮರ ನಷ್ಟವಾದರೆ ಅದಕ್ಕೆ ಪರಿಹಾರ ನೀಡಲಾಗುತ್ತಿದೆ. ಆದರೆ ಕೇರಳದಲ್ಲಿ 4-5 ಮರ ನಷ್ಟವಾದರೂ ಪರಿಹಾರ ನೀಡಲಾಗುತ್ತಿದೆ. ಇದೇ ಕ್ರಮವನ್ನು ಕರ್ನಾಟಕದಲ್ಲೂ ಅಳವಡಿಸಬೇಕು. ಮಾತ್ರವಲ್ಲ, ಮರ ಹಾಗೂ ಬೆಳೆಗೆ ಪ್ರತ್ಯೇಕ ಪರಿಹಾರ ನೀಡುವ ಕ್ರಮ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 27,602 ಹೆಕ್ಟರ್ ತೆಂಗು ಬೆಳೆ 1,02,106 ಹೆಕ್ಟೇರ್ ಅಡಿಕೆ ಬೆಳೆ 38,011 ಹೆಕ್ಟೇರ್ ಕಾಳು ಮೆಣಸು ಬೆಳೆಯುತ್ತಿದ್ದು ಜಿಲ್ಲೆಯ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ರೈತಾಪಿ ವರ್ಗ ಕುಂಭ ದ್ರೋಣ ಮಳೆಯಿಂದ ಅಡಿಕೆ. ಕಾಳುಮೆಣಸು ಹಾಗು ತೆಂಗು ಬೆಳೆ ನಾಶವಾಗಿ ಇಂದು ಆರ್ಥಿಕ ಹೊಡೆತ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆಯ 70% ಬೆಳೆ ಮಳೆಯಿಂದಾಗಿ ಹಾನಿಯಾಗಿದ್ದು, ಪ್ರಾಕೃತಿಕ ವಿಕೋಪ, ಗಾಳಿ, ಸಿಡಿಲು, ಭೂ ಕುಸಿತ ಇದರಿಂದಾಗಿ ಜಿಲ್ಲೆಯಲ್ಲಿ ಅಡಿಕೆ ಕೃಷಿಕರಿಗೆ ಅಪಾರ ಹಾನಿಯಾಗಿದೆ ಎಂದರು.
ಸುಳ್ಯ, ಮಡಿಕೇರಿ ತಾಲೂಕಿನಲ್ಲಿ ಕಾಣಿಸಿಕೊಂಡ ಅಡಿಕೆಯ ಹಳದಿ ರೋಗ ಪ್ರಸ್ತುತ ಕಡಬ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿಗು ವ್ಯಾಪಿಸಿದೆ ಎಲೆಚುಕ್ಕಿರೋಗ ಪ್ರತಿವರ್ಷ ಅಡಿಕೆ ಮರಕ್ಕೆ ಬಾದಿಸುತ್ತಿದ್ದು ಅಡಿಕೆಮರ ಸತ್ತು ಹೋಗುವಂತಹದ್ದು ಹಾಗೂ ಇಳುವರಿ ಕಡಿಮೆ ಯಾಗುವಂತಹದು ನಿರಂತರವಾಗಿ ನಡೆಯುತ್ತಾ ಇದ ಎಂದರು.
ಈ ಮಳೆಗಾಲದಲ್ಲಿ ರೈತರಿಗೆ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆಗೆ ಮಳೆಯಿಂದಾಗಿ ಅವಕಾಶ ಸಿಗದೆ ಪ್ರತಿಯೊಬ್ಬ ಅಡಿಕೆ ಬೆಳೆಗಾರ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ರೈತರಿಗೆ ನೀಡುವ ಅಲ್ಪಾವದಿ ಬೆಳೆ ಸಾಲ ಮನ್ನಾ ಮಾಡಬೇಕು. ಅಡಿಕೆ ಮರ ನಾಶ ಹೊಂದಿರುವ ರೈತರಿಗೆ ಮರು ನಾಟಿ ಮಾಡಲು ಕೇರಳ ಮಾದರಿಯಲ್ಲಿ ಸಹಾಯಧನ ನೀಡಬೇಕು. ಸರಕಾರ ತಕ್ಷಣ ಜಿಲ್ಲೆಯಲಿ ಅಡಿಕೆ ಬೆಳೆಯ ಹಾನಿಯ ಕುರಿತು ಸರ್ವೆ ಮಾಡಬೇಕು. 2018ರಲ್ಲಿ ಸರಕಾರ ಅಡಿಕೆಗೆ ಕೊಳೆರೋಗ ಬಂದಾಗ ಪರಿಹಾರ ನೀಡಿ ಉತ್ತಮ ಕೆಲಸ ಮಾಡಿತ್ತು. ಈ ವರ್ಷ ಕೂಡ ಅದೇ ರೀತಿಯ ಕೊಳೆರೋಗದಿಂದ ಹಾನಿಯಾದ ಅಡಿಕೆ ಬೆಳೆಗಾರನಿಗೆ ಪರಿಹಾರ ನೀಡಬೇಕು. ಬೆಲೆ ವಿಮೆಯ ವಿಮಾ ಮೊತ್ತವನ್ನು ಹೆಚ್ಚಿಸುವ ನೆಲೆಯಲ್ಲಿ ಸರಕಾರ ಟರ್ಮ್ ಶೀಟ್ ಬದಲಾಯಿಸಬೇಕು ಎಂದರು.
ಹಳದಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಅದಕ್ಕೆ ಕೇಂದ್ರ ಸರಕಾರ ಕೂಡ ಮಾಡಿದ 37 ಕೋಟಿ ರೂ. ಅನುದಾನಕ್ಕೆ ರಾಜ್ಯವು ಅನುದಾನ ಜೋಡಿಸಿ ರೈತರಿಗೆ ಪರಿಹಾರ ಹಾಗೂ ಪರ್ಯಾಯ ಬೆಳೆಗೆ ಅನುವು ಮಾಡಿಕೊಡಬೇಕು. ಸರಕಾರ ತಕ್ಷಣ ರೈತರ ಹಿತವನ್ನು ಕಾಪಾಡದೆ ಹೋದರೆ ರಾಜ್ಯದ ಇತರ ಭಾಗದಲ್ಲಿರುವ ರೈತರ ಹಾಗೆ ರೈತ ಆತ್ಮಹತ್ಯೆಗೂ ಶರಣಾಗುವ ಸಮಯ ದೂರ ಇಲ್ಲ ಎನ್ನುವ ವಿಚಾರವನ್ನು ಕೂಡ ಸರಕಾರದ ಮುಂದಿಡುತ್ತಿದ್ದೇವೆ ಎಂದರು.
ಮಂಗಗಳ ಹಾವಳಿ:
ಮಂಗಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೆ ಅವು ಕಾಡುಪ್ರಾಣಿ ಅಲ್ಲ ಎನ್ನುತ್ತಾರೆ ಎಂದು ಗಮನ ಸೆಳೆದಾಗ, ಮಂಗಗಳು ಕಾಡುಪ್ರಾಣಿ ಅಲ್ಲವೆಂದು ಅರಣ್ಯ ಇಲಾಖೆ ಗೆಜೆಟ್ ನೊಟಿಫಿಕೇಷನ್ ಹೊರಡಿಸಲಿ. ರೈತರು ಕೇಳಿದಾಗ ಮಾತ್ರ ಮಂಗ ಕಾಡುಪ್ರಾಣಿ ಅಲ್ಲ ಎನ್ನುತ್ತಾರೆ. ಇತ್ತೀಚೆಗೆ ಮಂಗವೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಾಗ, ಆ ಪರಿಸರದಲ್ಲೆಲ್ಲಾ ಅರಣ್ಯ ಇಲಾಖೆಯವರು ವಿಚಾರಣೆ ನಡೆಸಿದರು. ಯಾರಾದರೂ ಕೊಂದು ಹಾಕಿದ್ದಾರೆಯೇ ಎಂದು ತಿಳಿದುಕೊಳ್ಳಲು. ರೈತರಿಗೆ ತೊಂದರೆಯಾದಾಗ ಮಾತ್ರ ಮಂಗ ಕಾಡುಪ್ರಾಣಿ ಆಗುವುದಿಲ್ಲವೇ? ಇದರ ಬಗ್ಗೆ ಗೆಜೆಟ್ ನೊಟಿಫಿಕೇಷನ್ ಹೊರಡಿಸಿ ಅಧಿಕೃತ ಮಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಕೊರಂಗ, ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಖಜಾಂಜಿ ಎ.ಟಿ. ಕುಸುಮಾಧರ್ ಉಪಸ್ಥಿತರಿದ್ದರು.