ಸಂಪ್ಯ: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಸ್ವಚ್ಛತಾ ಸೇನಾನಿಗಳಾದ ಪುಷ್ಪಲತಾ ಸಂಪ್ಯ, ಉಷಾ ಸಂಪ್ಯ, ಪರಮೇಶ್ವರ ಕುಂಜೂರುಪಂಜ ಅವರನ್ನು ಬೂಡಿಯಾರ್ ಮನೆಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಸ್ವಚ್ಛತಾ ಅಭಿಯಾನ ಮುಂದುವರಿಸುವ ಪ್ರಯತ್ನ: ನವೀನ್ ಭಂಡಾರಿ
ಸನ್ಮಾನ ನೆರವೇರಿಸಿದ ತಾಪಂ ಇಓ ನವೀನ್ ಭಂಡಾರಿ ಮಾತನಾಡಿ, ಸ್ವಚ್ಛತಾ ಕಾರ್ಯದಲ್ಲಿ ನಿರತರಾದವರಿಗೆ ಮನೆಯಲ್ಲಿ ಸನ್ಮಾನ ಮಾಡುವುದು ಬಲು ಅಪರೂಪ. ಇಂತಹ ಕಾರ್ಯಕ್ಕೆ ಬೂಡಿಯಾರ್ ರಾಧಾಕೃಷ್ಣ ರೈ ಅವರು ಚಾಲನೆ ನೀಡಿದ್ದಾರೆ ಎಂದ ಅವರು, ಇತ್ತೀಚೆಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸ್ವಚ್ಛತಾ ಅಭಿಯಾನ ಆರಂಭಿಸಿದೆವು. ಪ್ರಾರಂಭದ ಹತ್ತು ದಿನ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಜನರು ಅದ್ಭುತ ಸಹಕಾರ ನೀಡಿದರು. ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಅಭಿಯಾನವನ್ನು ಮುಂದೆ ಕೊಂಡೊಯ್ಯಬೇಕಾದ ಅಗತ್ಯ ಇದೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಅಭಿಯಾನ ಮುಂದುವರಿಸಲು ಪ್ರಯತ್ನ ಪಡುತ್ತೇನೆ ಎಂದರು.
ದಂಡ ಪ್ರಯೋಗ ಅನಿವಾರ್ಯ: ಡಾ. ದೀಪಕ್ ರೈ
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, ಒಂದು ಮನೆಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿ, ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಕೆಲಸ. ಸ್ವಚ್ಛತೆ ನಮ್ಮ ಮನೆಯಲ್ಲಿ ಮಾತ್ರವಲ್ಲ, ಮನೆ ಹೊರಗಿನ ಪ್ರದೇಶವೂ ಶುಚಿಯಾಗಿರಬೇಕು. ಈಗಿನ ಪರಿಸ್ಥಿತಿ ನೋಡಿದರೆ, ಮನವೊಲಿಸುವ ಪ್ರಯತ್ನವಷ್ಟೇ ಸಾಲದು. ದಂಡ ವಿಧಿಸುವ ಕೆಲಸವೂ ಆಗಬೇಕಿದೆ. ಸ್ವಚ್ಛತೆಯ ಕೊರತೆಯಿದ್ದಾಗ ಚಿಕುಂಗುನ್ಯಾ, ಡೆಂಘೀಯಂತಹ ರೋಗಗಳು ಬಾಧಿಸುವ ಅಪಾಯ ಇದೆ. ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಹುಳುಗಳಾಗಿ ಪತ್ತೆಯಾದ ತ್ಯಾಜ್ಯ: ಗೀತಾ ಎಚ್.
ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಎಚ್. ಮಾತನಾಡಿ, ಸ್ವಚ್ಛತೆಯ ಕಲ್ಪನೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಇತ್ತೀಚೆಗೆ ನವೀನ್ ಭಂಡಾರಿ ಅವರು ನಡೆಸಿಕೊಟ್ಟ ಅಭಿಯಾನದಲ್ಲಿ ಕಸಗಳು ಹುಳ ಆಗಿದ್ದುದನ್ನು ಕಂಡಿದ್ದೇವೆ. ಆದ್ದರಿಂದ ತ್ಯಾಜ್ಯ ಬಿಸಾಡುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ತ್ಯಾಜ್ಯ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದರು.
ಪ್ಲಾಸ್ಟಿಕ್ ಮಹಾಮಾರಿಯಲ್ಲ: ನಾಗೇಶ್
ಆರ್ಯಾಪು ಗ್ರಾಪಂ ಪಿಡಿಓ ನಾಗೇಶ್ ಮಾತನಾಡಿ, ಪ್ಲಾಸ್ಟಿಕ್ ಮಹಾಮಾರಿಯಲ್ಲ. ಸೂಕ್ತ ತಂತ್ರಜ್ಞಾನದೊಂದಿಗೆ ಅದನ್ನು ವಿನಿಯೋಗಿಸಲು ತಿಳಿಯದೇ ಪ್ಲಾಸ್ಟಿಕ್ ಇಂದು ಮಹಾಮಾರಿಯಾಗಿದೆ. ಹಾಗಾಗಿ ತ್ಯಾಜ್ಯವನ್ನು ಬೇರ್ಪಡಿಸಿ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಿ. ಅದನ್ನು ಕಲ್ಲರ್ಪೆಯ ಸ್ವಚ್ವ ಸಂಕೀರ್ಣಕ್ಕೆ ರವಾನಿಸುತ್ತೇವೆ. ಅದರಲ್ಲಿ ಒಣ ಕಸವನ್ನು ಕೆದಂಬಾಡಿ ಬೋಳೋಡಿಯ ಎಂ.ಆರ್.ಎಫ್. (ಮೆಟೀರಿಯಲ್ ರಿಕವರಿ ಫ್ಯಾಕ್ಟರಿ)ಗೆ ಕಳುಹಿಸುತ್ತೇವೆ. ಅದನ್ನು ಕನ್ವೇಯರ್ ಬೆಲ್ಟ್’ಗೆ ಹಾಕಿ, ವಿಂಗಡಿಸಲಾಗುತ್ತದೆ ಎಂದರು.
ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಧ್ಯೇಯದಡಿ ಇಂದು ನಡೆದ ಸನ್ಮಾನ ಕಾರ್ಯಕ್ರಮ ಮಾದರಿ. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲೂ ಈ ಕೆಲಸ ಮಾಡಬೇಕು. ಸಾಮಾನ್ಯವಾಗಿ ತ್ಯಾಜ್ಯ ಸಂಗ್ರಹಿಸಲು ಕಾರ್ಮಿಕರೇ ಸಿಗುತ್ತಿಲ್ಲ. ಹೀಗಿರುವಾಗ ಸ್ವಯಂಪ್ರೇರಿತರಾಗಿ ಮುಂದೆ ಬಂದು, ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ಬಾಟಲಿಗಳದ್ದು ದೊಡ್ಡ ಸಮಸ್ಯೆ ಇತ್ತು. ಅದಕ್ಕಾಗಿ ಬಾಟಲಿಯನ್ನು ಮರಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಳವಡಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ನಾಗೇಶ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ತಾಲೂಕು ಸ್ವಚ್ಛ ಪಟ್ಟಣವಾಗಿ ಮೂಡಿಬರಬೇಕು. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹಕಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಪಂ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಬಿಜೆಪಿ ಕುರಿಯ ಬೂತ್ ಅಧ್ಯಕ್ಷ ಗಣೇಶ್ ರೈ ಬೂಡಿಯಾರ್, ಆನಂದ್ ರೈ ಡಿಂಬ್ರ, ದಾಮಯ್ಯ ಗೌಡ ಗಡಾಜೆ, ವಸಂತ ಗೌಡ ಕೊಡ್ಲಾರು, ಗಣೇಶ್ ಗೌಡ ಕೊಡ್ಲಾರು, ನಾರಾಯಣ ಕೊಡ್ಲಾರು, ಸುಧಾ ಮಣಿ ಜಿ. ರೈ ಬೂಡಿಯಾರ್, ಜಯಲಕ್ಷ್ಮೀ ರಾಧಾಕೃಷ್ಣ ರೈ ಬೂಡಿಯಾರ್, ತಿಲಕ್ ರೈ ಕುತ್ಯಾಡಿ, ಅಶ್ವಿತ್, ರಾಧಾಕೃಷ್ಣ ಮುಂಡೂರು ಮೊದಲಾದವರು ಉಪಸ್ಥಿತರಿದ್ದರು.