ಮಂಗಳೂರು: ಕೆಂಪುಕಲ್ಲು ಗಣಿಗಾರಿಕೆಯ ಗೊಂದಲ ನಿವಾರಣೆಗಾಗಿ ಮರಳು ವಿತರಣೆ ಮಾದರಿಯಲ್ಲಿರುವ ಸ್ಯಾಂಡ್ ಬಜಾರ್ ಆ್ಯಪ್ನಂತೆ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಹಿಂದೆ ಜಾರಿಗೆ ತರಲಾಗಿದ್ದ ‘ಸ್ಯಾಂಡ್ ಬಜಾರ್’ ಆ್ಯಪ್ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುತ್ತಿತ್ತು.ಅದೇ ಮಾದರಿಯಲ್ಲಿ ಕೆಂಪು ಕಲ್ಲು ಕೂಡ ಜನಸಾಮಾನ್ಯರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕೆಂಪುಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೊಳಿಸಲಾಗುವುದು.ಸರಕಾರಿ ದರದಲ್ಲಿ ಕೆಂಪು ಕಲ್ಲನ್ನು ಅಗತ್ಯ ಇರುವವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯು ನೂತನ ಆ್ಯಪ್ ಮೂಲಕ ಆಗಲಿದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ ಬೆಂಗಳೂರಿನಲ್ಲಿ 2ನೇ ಹಂತದ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಅಧಿಕಾರಿಗಳು ವಹಿಸಬೇಕಾದ ಕ್ರಮಗಳ ಕುರಿತು ಸೂಚಿಸಲಾಗಿದೆ.ಹಾಗಾಗಿ ಈ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.



























