ಕರಾಚಿ: ಕಾಶ್ಮೀರ ನರಮೇಧದ ಬೆನ್ನಲ್ಲೇ ಪಾಕಿಸ್ಥಾನ ಸೂಪರ್ ಲೀಗ್ ಕ್ರಿಕೆಟ್ (ಪಿಎಸ್ಎಲ್) ಅತಂತ್ರಕ್ಕೆ ಸಿಲುಕಿದೆ.
ನೇರಪ್ರಸಾರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಭಾರತದ ಎಂಜಿನಿಯರ್ಗಳು, ವ್ಯವಸ್ಥಾಪಕರು, ಛಾಯಾಗ್ರಾಹಕರು, ಆಟಗಾರರ ಪ್ರದರ್ಶನದ ಮೇಲೆ ನಿಗಾಯಿಡುವ ತಜ್ಞರು ಸೇರಿದಂತೆ ತಾಂತ್ರಿಕ ಸಿಬಂದಿಗೆ 48 ಗಂಟೆಗಳೊಳಗೆ ಪಾಕಿಸ್ಥಾನವನ್ನು ತೊರೆಯುವಂತೆ ಅಲ್ಲಿನ ಸರಕಾರ ಸೂಚಿಸಿದೆ. ಇದರ ಪರಿಣಾಮ ಪಿಎಸ್ಎಲ್ ನೇರಪ್ರಸಾರವೇ ಇಕ್ಕಟ್ಟಿನಲ್ಲಿದೆ. ಇವರೆಲ್ಲ ಅನುಭವಿ ತಜ್ಞರಾದ್ದರಿಂದ ಇವರ ಜಾಗವನ್ನು ತುಂಬುವುದು ಅಷ್ಟು ಸುಲಭವಲ್ಲ ಎನ್ನಲಾಗಿದೆ.
ನೇರಪ್ರಸಾರ ನಿಂತಿತು!
ಭಾರತದಲ್ಲಿ ಪಿಎಸ್ಎಲ್ ಪಂದ್ಯಾವಳಿಯನ್ನು ಡಿಜಿಟಲ್ ನೇರಪ್ರಸಾರ ಮಾಡುತ್ತಿದ್ದ ಫ್ಯಾನ್ಕೋಡ್ ಒಟಿಟಿ, ಕಾಶ್ಮೀರದ ನರಮೇಧದ ಬೆನ್ನಲ್ಲೇ ಪ್ರಸಾರ ನಿಲ್ಲಿಸಿದೆ. ಇದರಿಂದ ಪಿಎಸ್ಎಲ್ ವೀಕ್ಷಣೆ ಪ್ರಮಾಣದ ಮೇಲೆ ಭಾರೀ ಹೊಡೆತ ಬೀಳುವ ನಿರೀಕ್ಷೆಯಿದೆ. ಈಗಾಗಲೇ ಫ್ಯಾನ್ಕೋಡ್ನಲ್ಲಿನ ಮುಂದಿನ ಪಂದ್ಯಗಳ ಮಾಹಿತಿ, ಹಿಂದೆ ನಡೆದಿದ್ದ ಪಂದ್ಯದ ವೀಡಿಯೋಗಳು ಅಳಿಸಲ್ಪಟ್ಟಿವೆ.