ಪುತ್ತೂರು : ಡಾ. ವೀಣಾ ಬನ್ನಂಜೆ ಅವರ ನೇತೃತ್ವದಲ್ಲಿ ಏಳು ದಿನಗಳ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ಜೂ. 1ರಿಂದ 7ರತನಕ ಪುತ್ತೂರು ತೆಂಕಿಲ ದರ್ಶನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುವಚನಂ ಪುತ್ತೂರು, ದಿ. ಜಿ.ಎಲ್. ಆಚಾರ್ಯ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಾಮಿ ಕಲಾಮಂದಿರದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಮದ್ಭಾಗವತ, ಗರುಡ ಪುರಾಣ, ಭಾರತೀಯ ಆಧ್ಯಾತ್ಮದ ಕುರಿತು ಮುಂದಿನ ತಲೆಮಾರುಗಳಿಗೆ ತಿಳಿಯಪಡಿಸುವುದೇ ಸಪ್ತಾಹದ ಉದ್ದೇಶ. ಸನಾತನ ಧರ್ಮದ ಅರಿವನ್ನು ನೀಡುವ ಆಲೋಚನೆಯಿಂದಲೂ ಈ ಪ್ರವಚನವನ್ನು ಏರ್ಪಡಿಸಲಾಗಿದೆ ಎಂದರು.
ಸಂಜೆ 6 ರಿಂದ 8 ಗಂಟೆ ತನಕ ನಡೆಯುವ ಪ್ರವಚನ ಸಪ್ತಾಹವನ್ನು ನಿವೃತ್ತ ಸರಕಾರಿ ವೈದ್ಯ ಡಾ.ರಘು ಉದ್ಘಾಟಿಸಲಿದ್ದು, ಜಿ.ಎಲ್.ಸಮೂಹ ಸಂಸ್ಥೆಗಳ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಭಗವದರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಹಿಸಲಿದ್ದು, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಭಗವದರ್ಪಣೆಯ ಮಾತುಗಳನ್ನಾಡುವರು. ಅತಿಥಿಯಾಗಿ ಬಿರುಮಲೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಭಾಗವಹಿಸುವರು ಎಂದು ತಿಳಿಸಿದರು.
ಬಹುವಚನಂ ಸಂಸ್ಥೆಯ ಡಾ. ಶ್ರೀಶ ಕುಮಾರ್ ಮಾತನಾಡಿ, ಮದ್ಭಾಗವತದಲ್ಲಿ 12 ಚಾಪ್ಟರ್ ಗಳಿದ್ದು, ಸುಮಾರು 18 ಸಾವಿರ ಶ್ಲೋಕಗಳಿವೆ. ಇದರ ಕುರಿತು ಹೆಚ್ಚಿನವರಿಗೆ ಜ್ಞಾನವಿರುವುದಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಆಧ್ಯಾತ್ಮಿಕವಾಗಿ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಉಪಸ್ಥಿತರಿದ್ದರು.