ರಾಜ್ಯ ಬಿಜೆಪಿಯಲ್ಲಿ ಸದ್ಯ ಬಂಡಾಯದ ಕಿಚ್ಚು ಹೊತ್ತಿಕೊಂಡಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ಹೊತ್ತಲ್ಲೇ ಬಿಜೆಪಿ ನಾಯಕರ ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಇದು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸ್ಥಾನಕ್ಕೆ ಮುಳುವಾಗುತ್ತಿದ್ದರೆ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರೋ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವರದಾನ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಮತ್ತೊಂದೆಡೆ ಬಣ ಬಡಿದಾಟವೂ ಕಡಿಮೆಯೇನಿಲ್ಲ. ಈ ಎಲ್ಲ ಬೆಳವಣಿಗೆಗಳಿಂದಾಗಿ ರಾಜ್ಯ ಬಿಜೆಪಿಯಲ್ಲಿನ ಒಡಕು ಬೀದಿಗೆ ಬಂದಿದೆ. ಇಲ್ಲಿವರೆಗೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸ್ಥಾನ ಭದ್ರ ಎಂದೇ ಹೇಳಲಾಗುತ್ತಿತ್ತು. ಆದರೆ ದಿನ ಕಳೆದಂತೆ ವಿಜಯೇಂದ್ರ ಅವರ ಬಲ ಕುಗ್ಗುತ್ತಿದೆ.
ದಿನಕ್ಕೊಬ್ಬರು ನಾಯಕರು ವಿಜಯೇಂದ್ರ ವಿರುದ್ಧ ಸಿಡಿದು ಅಸಮಾಧಾನ ಹೊರಹಾಕುತ್ತಿದ್ದಾರೆ. ಯತ್ನಾಳ್ ಅವರ ಬಣವು ಮೊದಲಿನಿಂದಲೂ ವಿಜಯೇಂದ್ರ ಅವರನ್ನು ವಿರೋಧ ಮಾಡುತ್ತಲೇ ಬಂದಿದೆ. ಇತ್ತೀಚೆಗೆ ವಿಜಯೇಂದ್ರ ವಿರುದ್ಧ ಉಳಿದ ನಾಯಕರು ಕೂಡ ತಮ್ಮ ಅಸಮಾಧಾನ ಹೊರಹಾಕಿ ಬಂಡಾಯದ ಕಾವಿಗೆ ತುಪ್ಪ ಸುರಿದಿದ್ದಾರೆ.
ಶಾಸಕ ಸುನಿಲ್ ಕುಮಾರ್ ಅವರು ಪಕ್ಷದ ನೀಡಿರುವ ಜವಾಬ್ದಾರಿಯಿಂದ ಕೆಳಗಿಳಿಯುವ ನಿರ್ಧಾರ, ಸಭೆಯಲ್ಲೇ ಶ್ರೀರಾಮುಲು ಅವರ ಅಸಮಾಧಾನ, ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್ ಅವರ ಹೇಳಿಕೆಗಳು ಕೂಡ ವಿಜಯೇಂದ್ರ ಅವರಿಗೆ ಮುಳುವಾಗಿವೆ.
ಇದೂ ಸಾಲದು ಎಂಬಂತೆ ಇಂದು ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರು ವಿಜಯೇಂದ್ರ ಅವರ ವಿರುದ್ಧ ನೇರವಾಗಿ ತೊಡೆತಟ್ಟುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸುಧಾಕರ್ ಸಿಡಿದಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟು ಗೆದ್ದು ತೋರಿಸಿ ನೋಡೋಣ ಎಂದು ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ. ವಿಜಯೇಂದ್ರ ಅವರು ಪಕ್ಷವನ್ನು ಒಂದೇ ಸಲ ಮುಳುಗಿಸಲು ಹೋಗಿದ್ದಾರೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ. ವಿಜಯೇಂದ್ರ ಅವರ ಧೋರಣೆ ಬದಲಿಸಿ ಅಥವಾ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ ಎಂದು ಹೈಕಮಾಂಡ್ಗೆ ಹೇಳುತ್ತೇನೆ. ಪಕ್ಷದಲ್ಲಿರೋ ಬಣಗಳಿಗೆ ನನಗೂ ಆಹ್ವಾನವಿತ್ತು. ಆದರೆ ನಾನು ಹೋಗಿರಲಿಲ್ಲ ಎಂದೂ ಹೇಳಿದ್ದಾರೆ.
ಹಾಗಾಗಿ ಸ್ಪಪಕ್ಷದಲ್ಲೇ ವಿಜಯೇಂದ್ರ ಅವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ. ಮತ್ತೊಂದೆಡೆ ಯತ್ನಾಳ್ ಅವರ ಬಣ ಆನೆಯಂತೆ ಬಲಗೊಳ್ಳುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಯತ್ನಾಳ್ ಹೇಳಿಕೊಂಡಿದ್ದು, ಈಗ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಯತ್ನಾಳ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯಾಧ್ಯಕ್ಷರ ಚುನಾವಣೆಗೆ ಯತ್ನಾಳ್ ಬಣದಿಂದ ಪ್ರಬಲ ನಾಯಕ ಕಣಕ್ಕಿಳಿಯಲಿದ್ದು, ಖುದ್ದು ಯತ್ನಾಳ್ ಅವರೇ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿ.ಶ್ರೀರಾಮುಲು ಕೂಡ ಯತ್ನಾಳ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಕೂಡ ಈಗಾಗಲೇ ಬಣದಲ್ಲಿದ್ದಾರೆ. ಇದೀಗ ಕೆ.ಸುಧಾಕರ್ ಅವರು ಕೂಡ ಯತ್ನಾಳ್ ಅವರು ಬೆನ್ನಿಗೆ ನಿಲ್ಲಲಿದ್ದು, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.