ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಜೊತೆಗೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೇ 7 ಬುಧವಾರ ದೇಶದ 244 ಜಿಲ್ಲಗೆಳಲ್ಲಿ ಪೂರ್ಣ ಪ್ರಮಾಣದ ನಾಗರೀಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಯುತ್ತಿದೆ.
ಮೇ 7ರಂದು ದೇಶದ 244 ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿರುವ ರಕ್ಷಣಾ ತಾಲೀಮಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ ಮೋಹನ್ ಅವರು ಮಂಗಳವಾರ ಸಭೆ ಕರೆದಿದ್ದು, ತಾಲೀಮಿನ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆಂದು ತಿಳಿದುಬಂದಿದೆ.
ದೇಶಾದ್ಯಂತ ಮುಖ್ಯ ಕಾರ್ಯದರ್ಶಿಗಳು ಮತ್ತು ಸಿವಿಲ್ ಡಿಫೆನ್ಸ್ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾಗರಿಕರ ರಕ್ಷಣೆ ಸಂಬಂಧ ಅಣಕು ಕವಾಯತು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿತ್ತು.
ಮೇ 7ರಂದು ದೇಶದ 244 ಜಿಲ್ಲೆಗಳಲ್ಲಿ ನಾಗರಿಕ ರಕ್ಷಣಾ ತಾಲೀಮು ಆಯೋಜಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯಾವುದೇ ಸಂಭಾವ್ಯ ಪ್ರತಿಕೂಲ ದಾಳಿಗಳು ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಾಗರಿಕ ರಕ್ಷಣಾ ಯಂತ್ರೋಪಕರಣಗಳ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಹೆಚ್ಚಿಸುವುದು ಈ ಅಣಕು ಕವಾಯತಿನ ಮುಖ್ಯ ಉದ್ದೇಶವಾಗಿದೆ.
ಈ ಅಣಕು ಕವಾಯತು ಯುದ್ಧದಂತಹ ಪರಿಸ್ಥಿತಿಯನ್ನು ಅನುಕರಿಸುತ್ತದೆ ಮತ್ತು ಸೈರನ್ಗಳ ಸದ್ದು, ಸ್ಥಳೀಯ ತುರ್ತು ಸೇವೆಗಳಿಂದ ಸಂಘಟಿತ ಪ್ರತಿಕ್ರಿಯೆಗಳು ಮತ್ತು ಸಾರ್ವಜನಿಕ ಸುರಕ್ಷತೆ ಸೇರಿದಂತೆ ವಾಯುದಾಳಿ ಎಚ್ಚರಿಕೆ ವ್ಯವಸ್ಥೆಗಳ ಕಾರ್ಯಾಚರಣೆಯನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿಕೂಲ ವಾತಾವರಣದಲ್ಲಿ ಉದ್ಭವಿಸಬಹುದಾದ ಆಕಸ್ಮಿಕ ಘಟನೆಗಳಿಗೆ ರಾಷ್ಟ್ರ ಮತ್ತು ಅದರ ಆಡಳಿತಾತ್ಮಕ ಚೌಕಟ್ಟನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ. ನಾಗರಿಕ ರಕ್ಷಣಾ ಕವಾಯತು ದಶಕಗಳಲ್ಲಿ ಇದು ಮೊದಲ ಬಾರಿಯಾಗಿದೆ. ಈ ಅಣಕು ಕವಾಯತಿನ ಮೂಲಕ ಬಹು ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಮಾನವ ಪ್ರತಿಕ್ರಿಯೆ ಎರಡನ್ನೂ ಏಕಕಾಲದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏ.22ರಂದು ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು. ಈ ಉಗ್ರರು ಪಾಕಿಸ್ತಾನ ಬೆಂಬಲಿತ ಉಗ್ರರಾದ ಕಾರಣ ದೇಶದಾದ್ಯಂತ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿದೆ. ಈ ವರೆಗೂ ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ರಾಜತಾತ್ರಿಕ ಪ್ರತೀಕಾರ ಕ್ರಮಗಳನ್ನು ಕೈಗೊಂಡಿದ್ದು, ಈಗ ಅಣಕು ರಕ್ಷಣಾ ಕವಾಯತಿಗೆ ಸೂಚನೆ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.