ಇಂದೋರ್: ಸರಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿ ಕಡಿತದಿಂದ ಎರಡು ನವಜಾತ ಶಿಶುಗಳು ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಘಟನೆ ಬಳಿಕ ಮಧ್ಯಪ್ರದೇಶ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಗಸ್ಟ್ 30-31ರ ಮಧ್ಯರಾತ್ರಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಒಂದರ ಕೈಗೆ ಮತ್ತು ಇನ್ನೊಂದು ಶಿಶುವಿನ ಭುಜಕ್ಕೆ ಗಾಯವಾಗಿತ್ತು.
ಕೇವಲ 1.2 ಕಿಲೋಗ್ರಾಂಗಳಷ್ಟು ತೂಕವಿದ್ದ ಒಂದು ಶಿಶು ಮಂಗಳವಾರ ಸಾವನ್ನಪ್ಪಿದ್ದು, ತೀವ್ರ ಸೋಂಕು ಮತ್ತು ಜನ್ಮಜಾತ ತೊಂದರೆಗಳೇ ಸಾವಿಗೆ ಕಾರಣ ಎಂದು ವೈದ್ಯರು ಹೇಳಿಕೊಂಡರೂ, ನವಜಾತ ಶಿಶುಗಳ ವಾರ್ಡ್ನಲ್ಲಿ ಹೆಗ್ಗಣ ಕಂಡುಬಂದಿರುವುದು ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಮತ್ತು ನೈರ್ಮಲ್ಯದ ಕೊರತೆ ಎಂದು ಆಕ್ರೋಶಕ್ಕೆ ಕಾರಣವಾಯಿತು. ಎರಡನೇ ಶಿಶು ಬುಧವಾರ ನಿಧನಹೊಂದಿದೆ.
ಈ ವಿಷಯದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯ ನಿರ್ಲಕ್ಷ್ಯ ಮತ್ತು ಅಶುಚಿತ್ವದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.