ಅಂಕೋಲಾ, ಫೆ.19: 20 ದಿನಗಳ ಹಿಂದೆ ಅಂಕೋಲದಲ್ಲಿ ಕೋಟಿಗಟ್ಟಲೆ ಹಣದೊಂದಿಗೆ ಮಂಗಳೂರು ಮೂಲದ ಕಾರೊಂದು ಪತ್ತೆಯಾಗಿ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಅದೊಂದು ದರೋಡೆ ಕೃತ್ಯ ಎಂದು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಹೆಸರಾಂತ ಚಿನ್ನದ ವ್ಯಾಪಾರಿ ಹಾಗೂ ಇತರ ಮೂವರು ಅಂಕೋಲಾ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.ಜ .28ರಂದು ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ರೂ ನಗದು ಪತ್ತೆಯಾಗಿತ್ತು. ಹೆದ್ದಾರಿ ಪಕ್ಕದ ಕಾಡಂಚಿನಲ್ಲಿ ನಿಲ್ಲಿಸಿದ ಈ ಕಾರಿನ ನೋಂದಣಿ ಸಂಖ್ಯೆ ನಕಲಿಯಾಗಿತ್ತು. ಅದಕ್ಕೆ ಬೇರೊಂದು ಕಾರಿನ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಕಾರಿನ ಕಿಟಕಿ ಬಾಗಿಲಿನ ಗಾಜನ್ನು ಒಡೆದು ಹಾಕಲಾಗಿತ್ತು. ಸಾರ್ವಜನಿಕರಿಂದ ಮಾಹಿತಿ ಸಿಕ್ಕಿ ಸ್ಥಳಕ್ಕೆ ಆಗಮಿಸಿ ಪೊಲೀಸರು ಕಾರಿನ ಬಾಗಿಲು ಓಪನ್ ಮಾಡಿ ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ಸಿಕ್ಕಿದ್ದು, ಅದರಲ್ಲಿ 1.15 ಕೋಟಿ ಹಣ (Money)ವಿತ್ತು.
ಹಣ ದೊರಕಿರುವ ಕಾರಿನ ನೋಂದಣಿ ಸಂಖ್ಯೆ ಬದಲಾಯಿಸಿರುವುದು ಮತ್ತು ಕಾರಿನ ಗಾಜುಗಳನ್ನು ಒಡೆದು ಹಾನಿ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿತ್ತಲ್ಲದೇ ಕೋಟಿ ರೂ.ಗಳ ವಾರಸುದಾರರು ಯಾರೂ ಬಾರದಿರುವುದು ಹಣ ಯಾವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎನ್ನುವ ಕುತೂಹಲಕ್ಕೆ ಕಾರಣವಾಗಿತ್ತು. ಕಾರಿನ ಚಾಸಿಸ್ ನಂಬರ್ ಮೂಲಕ ಕಾರು ಮಂಗಳೂರಿನ ಅಳಕೆಯಲ್ಲಿ ವಾಸವಾಗಿರುವ ಮಹಾರಾಷ್ಟ್ರದ ಖಾನಾಪುರ ಮೂಲದ ಬಂಗಾರದ ಆಭರಣಗಳ ತಯಾರಕ ವಿವೇಕ ಸುರೇಶ ಪವಾರ್ (26) ಅವರಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ವಿವೇಕ ಪವಾರ್, ಮಂಗಳೂರು ಕಾರ್ ಸ್ಟ್ರೀಟ್ ನಿವಾಸಿ ರಾಜೇಂದ್ರ ಪ್ರಕಾಶ್ ಪವಾರ್, ಬಂಟ್ವಾಳದ ಪುಣಚ ನಿವಾಸಿ ಅಬ್ದುಲ್ ಸಮದ್ ಅಂದುನಿ ಮತ್ತು ಮಂಗಳೂರು ಜಪ್ಪು ಕುಡುಪಾಡಿ ನಿವಾಸಿ ಮಹಮ್ಮದ್ ಇಸಾಕ್ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿದ್ದು ದರೋಡೆ ಕುರಿತಂತೆ ದೂರು ನೀಡಿದ್ದಾರೆ. ದರೋಡೆ ಕೃತ್ಯದಿಂದ ಹೆದರಿ ತಾವು ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ
ದೂರಿನಲ್ಲಿ ಏನಿದೆ?
ಮಂಗಳೂರಿನ ರಾಜೇಂದ್ರ ಪವಾರ್ ಅವರ ಕಾರು ಚಾಲಕ ಮಹಮ್ಮದ್ ಇಸಾಕ್ ಅವರು ರಾಜೇಂದ್ರ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಕಾಶ ಪವಾರ್ ಸೂಚನೆಯಂತೆ ಬೆಳಗಾವಿಯ ಸಚಿನ್ ಜಾಧವ ಎನ್ನುವವರಿಗೆ ಬಂಗಾರ ತಲುಪಿಸಿ ಅವರಿಂದ ಹಣ ತರಲು ಇನ್ನೋರ್ವ ಚಾಲಕ ಅಬ್ದುಲ್ ಸಮದ್ ಜತೆ ಜ. 26ರಂದ ಬೆಳಗ್ಗೆ 3.45 ಕ್ಕೆ kA.19MP 1036 ಹೊರಟಿದ್ದು ಸೀಟಿನ ಕೆಳಗೆ ಇರುವ ಲಾಕರ್ ನಲ್ಲಿ ಬಂಗಾರ ಇಟ್ಟು ಕಾರಿನ ನಂಬರ್ ಪ್ಲೇಟ್ ಬದಲಾಯಿಸಿKA.51MB. 9634 ಬೆಳಗಾವಿಗೆ ಹೊರಟಿದ್ದರು.
ಬೆಳಗ್ಗೆ 11.30ರ ಸುಮಾರಿಗೆ ಬೆಳಗಾವಿ ತಲುಪಿದ್ದು ಅಲ್ಲಿ ತುಷಾರ್ ಎನ್ನುವವರು ಬಂದು 2.95 ಕೋಟಿ ರೂ.ನೀಡಿ ಬಂಗಾರ ತೆಗೆದುಕೊಂಡು ಹೋಗಿದ್ದರು. ಅವರು ನೀಡಿರುವ ನಗದು ಹಣದಲ್ಲಿ 1.80 ಕೋಟಿ ರೂ. ಹಣವನ್ನು ಡೈವರ್ ಕೆಳಗಡ ಸೀಟಿನೆ ಅಡಿಯಲ್ಲಿ ಮತ್ತು 1.15 ಕೋಟಿ ರೂ. ಹಣವನ್ನು ಹಿಂಬದಿ ಸೀಟಿನ ಅಡಿಯಲ್ಲಿರುವ ಲಾಕರಿನಲ್ಲಿ ಇಟ್ಟು ಮರಳಿ ಬರುತ್ತಿದ್ದ ವೇಳೆ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಬಿಳಿ ಬಣ್ಣದ ಸ್ವಪ್ಟ್ ಕಾರಿನಲ್ಲಿ ಓವರ್ ಟೇಕ್ ಮಾಡಿ ಬಂದ ಐದು ಜನ ಅಪರಿಚಿತ
ವ್ಯಕ್ತಿಗಳು ತಲವಾರ್, ಚಾಕು ಹಿಡಿದು ಅಡ್ಡಗಟ್ಟಿ ಕಾರಿನ ಗಾಜುಗಳನ್ನು ಒಡೆದು ಇಬ್ಬರು ಚಾಲಕರ ಮೊಬೈಲ್ ಮತ್ತು ಪರ್ಸ್ ಕಸಿದು ಕಾರನ್ನು ಅಪಹರಿಸಿ ಚಾಲಕನ ಸೀಟಿನ ಅಡಿ ಇದ್ದ 1.75 ಕೋಟಿ ರೂ. ದರೋಡೆ ಮಾಡಿದ್ದರು. ಬಳಿಕ ಕಾರನ್ನು ರಾಮನಗುಳಿ ಬಳಿ ಬಿಟ್ಟು ತೆರಳಿದ್ದರು.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಜಗದೀಶ ಎಂ., ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದರೋಡೆ ಆರೋಪಿಗಳ ಪತ್ತೆಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಚಿನ್ನಾಭರಣ ವ್ಯವಹಾರಕ್ಕೆ ಹೋಗುತ್ತಿದ್ದವರು ಅರ್ಧ ದಾರಿಯಲ್ಲಿ ಕಾರಿನ ನಂಬರ್ ಪ್ಲೇಟನ್ನು ಬದಲಿಸಿದ್ದೇಕೆ ಎಂಬ ಮಾಹಿತಿ ತನಿಖೆಯಾದ ಬಳಿಕ ತಿಳಿಯಬೇಕಿದೆ. ದೂರುದಾರರು ಕೂಡ ಹವಾಲ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳು ಮೂಡಿವೆ.
ಹವಾಲ ದಂಧೆ
ಮೂಲಗಳ ಪ್ರಕಾರ ಮಂಗಳೂರಿನಲ್ಲಿ ಹವಾಲ ದಂಧೆಯ ಜಾಲವೊಂದು ಸಕ್ರಿಯವಾಗಿದ್ದು, ವಿದೇಶದಿಂದ ವಾಮ ಮಾರ್ಗದಲ್ಲಿ ಚಿನ್ನ ತಂದು ಅದನ್ನು ಮುಂಬಾಯಿ ಮಾರುಕಟ್ಟೆಗೆ ಮಾರಾಟ ಮಾಡಲಾಗಿದೆ. ಈ ಮಧ್ಯೆ ಸರಕಾರಕ್ಕೆ ನ್ಯಾಯಾಯುತವಾಗಿ ಸಲ್ಲಬೇಕಾದ ತೆರಿಗೆಯನ್ನು ವಂಚಿಸಲಾಗುತ್ತಿದೆ. ಇದರ ಜತೆಗೆ ಕದ್ದ ಬಂಗಾರಗಳನ್ನು ಈ ತಂಡ ಕಡಿಮೆ ದರಕ್ಕೆ ಖರೀದಿಸಿ ಮುಂಬಾಯಿಯ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಚಿನ್ನ ಹಾಗೂ ಹಣದ ಸಾಗಾಟಕ್ಕಾಗಿ ಈ ದಂಧೆಕೋರರು ನಕಲಿ ನೋಂದಣಿಯ ನಂಬರ್ ಪ್ಲೇಟ್ ಇರುವ ಕಾರುಗಳನ್ನು ಬಳಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.