ಬೆಂಗಳೂರು: ಕರ್ನಾಟಕದ ಹೆಸರಾಂತ ಕ್ರೀಡಾಪಟು ಬೃಂದಾ ಪ್ರಭು(68 ವರ್ಷ) ಅವರು ಇಂದು ಮುಂಜಾನೆ ಕಾಶಿಯಲ್ಲಿ ನಿಧನರಾಗಿದ್ದಾರೆ.
ಇವರು ಮೂರೂವರೆ ದಶಕಗಳ ಹಿಂದೆ ಅಂತರ್ ರಾಷ್ಟ್ರೀಯ ಮಹಿಳಾ ಫುಟ್ಬಾಲ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯದ ವಾಲಿಬಾಲ್ ತಂಡದ ಉಪ ನಾಯಕಿಯಾಗಿದ್ದರು. ಅಂಚೆ ಮತ್ತು ತಂತಿ ಇಲಾಖೆಯ ಅಖಿಲ ಭಾರತ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಆಗಿದ್ದರು.
ಇವರು ತಮ್ಮ ಪತಿ ಭಾರತದ ಪ್ರಖ್ಯಾತ ಅಂತರ್ ರಾಷ್ಟ್ರೀಯ ಅಥೀಟ್, ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕೃತ ಉದಯ ಪ್ರಭು ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಪುತ್ರನನ್ನು ಅಗಲಿದ್ದಾರೆ.
ಬೃಂದಾ ಪ್ರಭು ಅವರು ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಹೊರಟು ಪ್ರಯಾಗ್ ರಾಜ್ ಗೆ ಹೋಗಿ ಪುಣ್ಯಸ್ನಾನ ಮಾಡಿ, ರವಿವಾರ ಕಾಶಿಗೆ ತಲುಪಿ ವಿಶ್ವೇಶ್ವರನ ದರ್ಶನ ಮುಗಿಸಿ ಮಲಗಿದ್ದವರು. ಮುಂಜಾನೆ ನಿದ್ದೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಕಾಶಿ ಮಠದಲ್ಲಿ ಇರಿಸಲಾಗಿದ್ದು, ನಾಳೆ ಮಗ ಬಂದ ತಕ್ಷಣ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಉದಯ ಪ್ರಭು ಅವರು ತಿಳಿಸಿದ್ದಾರೆ