ಚೆನ್ನೈ : ರಜನಿಕಾಂತ್ ಅಭಿನಯದ ಕಬಾಲಿ ಸಹಿತ ಅನೇಕ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ತಮಿಳು, ತೆಲುಗಿನ ಖ್ಯಾತ ನಿರ್ಮಾಪಕ ಕೆ.ಪಿ.ಚೌಧರಿ ಯವರ (44) ಶವ ಗೋವಾದ ಹಳ್ಳಿಯೊಂದರಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾದ ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಚೌಧರಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಾದ ಸಿಯೋಲಿಮ್ ಗ್ರಾಮದ ಬಾಡಿಗೆ ಮನೆಯಲ್ಲಿ ಚೌಧರಿ ವಾಸವಾಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ತಿಳಿಸಿದ್ದಾರೆ. ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಔಟ್ಪೋಸ್ಟ್ ಬಳಿ ಅವರ ಮನೆಯಿತ್ತು.
ಸೂಪರ್ಸ್ಟಾರ್ ರಜನಿಕಾಂತ್ ಅವರ ಕಬಾಲಿ ಚಿತ್ರವನ್ನು ಚೌಧರಿ ತೆಲುಗಿನಲ್ಲಿ ನಿರ್ಮಿಸಿ ಸಕ್ಸಸ್ ಕಂಡಿದ್ದರು. 2023ರಲ್ಲಿ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡವು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಅವರನ್ನು ಬಂಧಿಸಿತ್ತು. ಚೌದರಿ ಟಾಲಿವುಡ್ ಮಾತ್ರವಲ್ಲದೆ, ಕಾಲಿವುಡ್ನಲ್ಲೂ ಸಕ್ರಿಯರಾಗಿದ್ದರು. ಕೆಲಸಮಯದಿಂದ ಚೌಧರಿ ಅನೇಕ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು ಮೈತುಂಬ ಸಾಲ ಮಾಡಿಕೊಂಡಿದ್ದ ಹಿನ್ನೆಲೆ ಸಾಲ ನೀಡಿದವರಿಂದಲೂ ಹೆಚ್ಚಿನ ಒತ್ತಡವಿತ್ತು ಎನ್ನಲಾಗಿದೆ. ಡ್ರಗ್ ಕೇಸ್ನ ಬಳಿಕ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ಸಿನಿಮಾಗಳ ಮೂಲಕ ಚೌಧರಿ ಯಶಸ್ಸು ಕಂಡಿದ್ದರೂ ಇತ್ತೀಚೆಗೆ ಅವರು ಇಂಡಸ್ಟ್ರಿಯಲ್ಲಿ ಹಿನ್ನಡೆ ಕಂಡಿದ್ದರು. ಇದರಿಂದಾಗಿಯೇ ಅವರು ಡ್ರಗ್ಸ್ ಜಾಲಕ್ಕೂ ಕಾಲಿಟ್ಟಿದ್ದರು ಎನ್ನಲಾಗಿದೆ. ಗೋವಾದ ಒಎಚ್ಎಂ ಪಬ್ನ ಮೂಲಕ ಸರಬರಾಜು ಮಾಡಿದ ಡ್ರಗ್ಸ್ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಚೌಧರಿ ಕೂಡ ಭಾಗಿಯಾಗಿದ್ದರು ಎನ್ನುವ ಗಂಭೀರ ಆರೋಪವಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಾರಣ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ಅವರು ಚೌಧರಿ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಅವರ ಸ್ನೇಹಿತರು ಹೇಳಿದ್ದಾರೆ.
ಮೂಲತಃ ಖಮ್ಮಮ್ ಜಿಲ್ಲೆಯವರಾದ ಚೌಧರಿ 2016ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 2023ರಲ್ಲಿ ಸೈಬರಾಬಾದ್ ಪೊಲೀಸರು 93 ಗ್ರಾಂ ಕೊಕೇನ್ನೊಂದಿಗೆ ಚೌಧರಿ ಅವರನ್ನು ಬಂಧಿಸಿದ್ದರು. ಇವರಿಗೆ ಚಿತ್ರರಂಗ ಮತ್ತು ಉದ್ಯಮಿಗಳೊಂದಿಗೆ ಉತ್ತಮ ಸಂಪರ್ಕವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೇಸ್ ಬಳಿಕ ಚೌಧರಿ ಗೋವಾಗೆ ತೆರಳಿ ಅಲ್ಲಿ ಕ್ಲಬ್ ತೆರೆದಿದ್ದರು. ಆದರೆ ಇದರಿಂದ ಅವರು ನಷ್ಟ ಅನುಭವಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.