ಬಿಜೆಪಿ ಯುವ ಮುಖಂಡ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿ ಅತೀಕ್ ಅಹ್ಮದ್ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಪಿಎಫ್ಐ ನಾಯಕತ್ವದ ಅಡಿಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಫಾ ಪೈಚಾರ್ಗೆ ಆತೀಕ್ ಅಹ್ಮದ್ ಆಶ್ರಯ ನೀಡಿ ಸಹಾಯ ಮಾಡಿದ್ದುದು ತನಿಖೆಯಲ್ಲಿ ತಿಳಿದುಬಂದಿದೆ.
ಜನರಲ್ಲಿ ಭಯ ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್ಐ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಕೊಲೆಯನ್ನು ಮುಸ್ತಫಾ ಯೋಜಿಸಿ ಕಾರ್ಯಗತಗೊಳಿಸಿದ್ದ. ಕೃತ್ಯದ ಬಳಿಕ ಮುಸ್ತಫಾ ಪರಾರಿಯಾಗಿದ್ದು, ಈ ವೇಳೆ ಆರೋಪಿ ಅತೀಕ್ ಆತನನ್ನು ಚೆನ್ನೈಗೆ ಕಳಿಸಿರುವುದು ಸಹಿತ ಆತನಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದ. 2024ರ ಮೇ ತಿಂಗಳಲ್ಲಿ ಮುಸ್ತಫಾನನ್ನು ಬಂಧಿಸುವವರೆಗೂ, ಆರೋಪಿ ಆತೀಕ್ ಅಹ್ಮದ್ ಸಹಕಾರ ನೀಡಿ ದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
2022ರ ಆಗಸ್ಟ್ನಲ್ಲಿ ಪ್ರವೀಣ್ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡಿತ್ತು. ಪಿಎಫ್ಐ, ಪಿಎಫ್ಐ ಸೇವಾ ತಂಡಗಳು ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ ಎಂದು ಎನ್ಐಎ ತನ್ನ ತನಿಖೆಯಲ್ಲಿ ಕಂಡುಹಿಡಿದಿತ್ತು. ಪ್ರವೀಣ್ ಕೊಲೆ ಪ್ರಕರಣದ ಉಳಿದ 6 ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.





















